ಕೊಲ್ಹಾಪುರ ( ಮಹಾರಾಷ್ಟ್ರ) : ಆಕ್ಸಿಜನ್ ಬಗ್ಗೆ ಸಂಶೋಧನೆ ಮಾಡಿದ ವಿಜ್ಞಾನಿ ಡಾ. ಬಾಲಚಂದ್ರ ಕಾಕಡೆ ಚೆನ್ನೈನ ಕೋವಿಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಡಾ. ಬಾಲಚಂದ್ರ ಅವರು ಕೋವಿಡ್ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿ ಅಸುನೀಗಿದ್ದಾರೆ ಎಂದು ಹೇಳಲಾಗ್ತಿದೆ.
44 ವಷದ ಡಾ. ಬಾಲಚಂದ್ರ ಕಾಕಡೆ ಆಕ್ಸಿಜನ್ ಮತ್ತು ಹೈಡ್ರೋಜನ್ನಿಂದ ರೈಲು ಕೂಡ ಚಲಿಸುವಂತಹ ಇಂಧನ ತಯಾರಿಸುವ ಬಗ್ಗೆ ಸಂಶೋಧನೆ ಮಾಡಿದ್ದರು. ಇಂಧನ ಉತ್ಪಾದನೆ ಬಗ್ಗೆ ಇವರು ಮಾಡಿದ ಸಂಶೋಧನೆಗಳಿಗೆ 7 ಅಂತಾರಾಷ್ಟ್ರೀಯ ಮಟ್ಟದ ಪೇಟೆಂಟ್ ಸಹ ಪಡೆದಿದ್ದರು.
ಆಮ್ಲಜನಕದ ಸೂಕ್ಷ್ಮದರ್ಶಕ ಗುಣಲಕ್ಷಣಗಳು ಎಂಬ ವಿಷದಯಲ್ಲಿ ಡಾ. ಬಾಲಚಂದ್ರ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಅದೇ ಆಕ್ಸಿಜನ್ ಸಿಗದೆ ಡಾ. ಕಾಕಡೆ ನಿಧನಾಗಿರುವುದು ವಿಪರ್ಯಾಸ.
ಮೂಲತಃ ಕೊಲ್ಹಾಪುರದವರಾದ ಡಾ. ಕಾಕಡೆ, ಚೆನ್ನೈ ಎಸ್ಆರ್ಎಂ ಇನ್ಸ್ಟ್ಯೂಟ್ನಲ್ಲಿ ಸಂಶೋಧಕರಾಗಿದ್ದರು. ಇವರ ಪತ್ನಿ ಕೂಡ ಸಂಶೋಧಕರಾಗಿದ್ದಾರೆ. ಸಂಸ್ಥೆಯ ಲ್ಯಾಬ್ನಲ್ಲಿ ಕೆಲ ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಬಳಿಕ ಬಾಲಚಂದ್ರ ಅವರಿಗೂ ಸೋಂಕು ದೃಢಪಟ್ಟಿತ್ತು. ಮೊದಲ ನಾಲ್ಕು ದಿನಗಳ ಕಾಲ ಮನೆಯಲ್ಲೇ ಚಿಕಿತ್ಸೆ ಪಡೆದ ಅವರು, ಕೊನೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಕೆಲ ದಿನಗಳಿಂದ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.
ಶುಕ್ರವಾರ ತಡರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 10 ಕೋವಿಡ್ ಸೋಂಕಿತರು ಮೃತಪಟ್ಟಿರುವುದಾಗಿ ಹೇಳಲಾಗುತ್ತಿದ್ದು, ಈ ಪೈಕಿ ಡಾ. ಕಾಕಡೆ ಕೂಡ ಒಬ್ಬರು. ಆಕ್ಸಿಜನ್ ಸಂಶೋಧಕನೇ ಆಕ್ಸಿಜನ್ ಸಿಗದೆ ಮೃತಪಟ್ಟಿರುವ ಸುದ್ದಿ ಚೆನ್ನೈ ಮತ್ತು ಕೊಲ್ಹಾಪುರದ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾನಿಯದಿಂದ ರಸಾಯನ ಶಾಸ್ತ್ರದಲ್ಲಿ ಪದವಿ ಪೂಣ್ಣಗೊಳಿಸಿದ ಬಳಿಕ ಫೆಲೋಶಿಫ್ ಪಡೆದ ಡಾ. ಬಾಲಚಂದ್ರ, ಪುಣೆಯ ಕೆಮಿಕಲ್ ಲ್ಯಾಬ್ನಲ್ಲಿ ಇಂಧನ ಉತ್ಪಾದನೆಯ ಬಗ್ಗೆ ಸಂಶೋಧನೆ ಮಾಡಿದರು. ಇದರ ಜೊತೆಗೆ ಜಪಾನ್ನ ಟೋಕಿಯೋ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿ ಲ್ಯಾಬ್ನಲ್ಲಿ ಕೂಡ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು.