ರಾಯ್ ಬರೇಲಿ (ಉತ್ತರಪ್ರದೇಶ): ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪುರೋಹಿತ ವರ್ಗದವರು, ಸಾಧುಗಳು, ಸಂಸ್ಕೃತ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನ ನೀಡಲು ಪುರೋಹಿತ್ ವೆಲ್ಫೇರ್ ಬೋರ್ಡ್ ಸ್ಥಾಪಿಸುವುದಾಗಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ನಾವು ಪುರೋಹಿತ ವರ್ಗದ ಕಲ್ಯಾಣಕ್ಕಾಗಿ ಪುರೋಹಿತ್ ಕಲ್ಯಾಣ್ ಬೋರ್ಡ್ ಸ್ಥಾಪಿಸಲು ನಿರ್ಧರಿಸಿದ್ದೇವೆ. ಈ ಯೋಜನೆಯ ಮೂಲಕ ಎಲ್ಲಾ ಸಂಸ್ಕೃತ ವಿದ್ಯಾರ್ಥಿಗಳಿಗೆ ವಿಶೇಷ ವೇತನ ದೊರೆಯುವುದಾಗಿ ಅವರು ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಯೋಗಿ, ಅವರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಏನೂ ಗೊತ್ತಿಲ್ಲ, ಅವರು ತಮ್ಮನ್ನು ತಾವು ಆಕಸ್ಮಿಕ ಹಿಂದುಗಳು ಎಂದು ಕರೆದುಕೊಳ್ಳುತ್ತಾರೆ. ರಾಯ್ ಬರೇಲಿಯಲ್ಲಿ ಅಪಾರ ಜನ ಸೇರಿರುವುದು ನಮ್ಮ ಗೆಲುವಿನ ಸಂಕೇತ ಮತ್ತು ಕುಟುಂಬ ರಾಜಕಾರಣಕ್ಕೆ ಐತಿಹಾಸಿಕ ಸೋಲು. ನಾವು ಈಗಾಗಲೇ ಚುನಾವಣೆ ಗೆದ್ದಿದ್ದೇವೆ ಎಂದರು.
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯು ಫೆ. 10 ರಿಂದ ಮಾ. 7ರ ವರೆಗೆ ನಡೆಯಲಿದ್ದು 403 ಮಂದಿ ಸದಸ್ಯರು ಚುನಾಯಿತರಾಗಲಿದ್ದಾರೆ. ಒಟ್ಟು 7 ಹಂತದಲ್ಲಿ ನಡೆಯಲಿರುವ ಚುನಾವಣೆಯ ಫಲಿತಾಂಶವು ಮಾ.10ಕ್ಕೆ ಹೊರಬೀಳಲಿದೆ.
ಇದನ್ನೂ ಓದಿ : ಉಕ್ರೇನ್ ಬಿಕ್ಕಟ್ಟು: ಭದ್ರತಾ ಮಂಡಳಿಯ ತುರ್ತು ಸಭೆ ಕರೆದ ವಿಶ್ವಸಂಸ್ಥೆ