ಇಸ್ಲಾಮಾಬಾದ್: ನವಾಜ್ ಷರೀಫ್ ಅನಾರೋಗ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪಾಕ್ ಸರ್ಕಾರ, ಷರೀಫ್ ಯಾವುದೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿಲ್ಲ ಅಥವಾ ಕಳೆದ ಮೂರು ತಿಂಗಳಲ್ಲಿ ಯಾವುದೇ ತುರ್ತು ಪರಿಸ್ಥಿತಿಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಎಂದು ಹೇಳಿದೆ.
ಈ ಹಿನ್ನೆಲೆ ಚಿಕಿತ್ಸೆ ಕಾರಣಕ್ಕಾಗಿ ಲಂಡನ್ಗೆ ತೆರಳಿರುವ ನವಾಜ್ ಷರೀಫ್ ಅವರನ್ನು ಲಂಡನ್ನಿಂದ ಗಡಿಪಾರು ಮಾಡುವಂತೆ ಯುಕೆ ಸರ್ಕಾರಕ್ಕೆ ಪತ್ರ ಬರೆಯಲಿದ್ದೇವೆ ಎಂದು ಪಾಕ್ ಮಾಹಿತಿ ಮತ್ತು ಪ್ರಸಾರದ ಪ್ರಧಾನಮಂತ್ರಿಯ ವಿಶೇಷ ಸಹಾಯಕ ಫಿರ್ದೋಸ್ ಆಶಿಕ್ ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಷರೀಫ್ ಯಾವುದೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಮತ್ತು ಯಾವುದೇ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಎಂದು ಅವನ್ ಹೇಳಿದ್ದಾರೆ. "ವಿದೇಶದಲ್ಲಿರುವ ಈ ವಿಐಪಿ ಖೈದಿಯನ್ನು ಮರಳಿ ಕರೆತರುವ ಸಮಯ ಬಂದಿದೆ ಎಂದಿದ್ದಾರೆ. ಈ ಮಧ್ಯೆ ಚಿಕಿತ್ಸೆಗಾಗಿ ವಿದೇಶದಲ್ಲಿಯೇ ಇರುವುದಕ್ಕೆ ಅವಕಾಶ ವಿಸ್ತರಿಸಲು ಪಂಜಾಬ್ ಸರ್ಕಾರ ನಿರಾಕರಿಸಿದ್ದನ್ನು ಪ್ರಶ್ನಿಸಿ ನವಾಜ್ ಷರೀಫ್ ಲಾಹೋರ್ ಹೈಕೋರ್ಟ್ಗೆ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಕಳೆದ ವರ್ಷ, ಚೌಧರಿ ಶುಗರ್ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿದ್ದ ಷರೀಫ್ ಅವರನ್ನು ಬಂಧಿಸಲಾಗಿತ್ತು. ನಂತರ, ಇಸ್ಲಾಮಾಬಾದ್ ಹೈಕೋರ್ಟ್ ಷರೀಫ್ ಜಾಮೀನು ಅರ್ಜಿ ಅಂಗೀಕರಿಸಿ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡಿತ್ತು.