ಉತ್ತರ ಪ್ರದೇಶ: ಸರ್ವ ಧರ್ಮದವರನ್ನು ಸಮಾನವಾಗಿ ಕಾಣುವ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಇಡೀ ಜಗತ್ತೇ ತಲೆ ಬಾಗಿದೆ. ವಿವಿಧತೆಯಲ್ಲಿ ಏಕತೆ ಮೆರೆಯುವ ದೇಶ ಭಾರತ. ಹಿಂದೂ, ಮುಸಲ್ಮಾನ, ಕ್ರೈಸ್ತ ಎನ್ನದೇ ಎಲ್ಲರೂ ಸೌಹಾರ್ದತೆಯಿಂದ ಬಾಳುತ್ತಾರೆ.
ಧಾರ್ಮಿಕ ಸಹೋದರತ್ವಕ್ಕಿಂತ ಏಕತೆಯ ಸಂದೇಶ ದೊಡ್ಡದು. ನಿಜ ಈ ಸಾಲುಗಳು ಉತ್ತರ ಪ್ರದೇಶದ ಸಹರಾನ್ಪುರದ ಜನರಿಗೆ ತುಂಬಾ ಸೂಕ್ತವಾಗುತ್ತದೆ. ಹಾಗೂ ಅವರ ಏಕತೆಯ ಮನೋಭಾವ ಸಾರುತ್ತದೆ. ಅಲ್ಲಿನ ಬಹುತೇಕರು ಮರದ ಕೆತ್ತನೆ ಮತ್ತು ಮರದ ವ್ಯಾಪಾರ ಮಾಡುತ್ತಾರೆ. ಮರದ ಸುಂದರ ದೇವರ ಪೂಜಾ ಮಂಟಪಗಳನ್ನು ನಿರ್ಮಿಸುವುದು ಅವರ ಕಾಯಕವಾಗಿದೆ. ಅವರಲ್ಲಿ ಶೇಕಡಾ 90 ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ.
ಶುಕ್ರವಾರ ಮತ್ತು ಈದ್ ದಿನದಂದು ಧಾರ್ಮಿಕವಾಗಿ ಪ್ರಾರ್ಥನೆ ಸಲ್ಲಿಸುವ ಈ ಮುಸ್ಲಿಮರು, ಹಿಂದೂ ದೇವರುಗಳಿಗಾಗಿ ಮರದ ಮಂಟಪ ಮಾಡಿ ಜನರ ಗಮನ ಸೆಳೆಯುತ್ತಾರೆ. ಈ ಮುಸ್ಲಿಂ ಕುಶಲಕರ್ಮಿಗಳು ಮರದ ಮಂಟಪ ಮಾಡುವ ಮೂಲಕ, ತಮ್ಮ ಜೀವನ ನಡೆಸುತ್ತಿದ್ದಾರೆ. ಇವುಗಳಿಗೆ ದೇಶದಲ್ಲಿ ಮಾತ್ರವಲ್ಲದೇ ವಿದೇಶದಿಂದಲೂ ಹೆಚ್ಚಿನ ಬೇಡಿಕೆ ಇದೆ.
ಈ ಪೂಜಾ ಮಂಟಪಗಳ ತಯಾರಿಕೆಯನ್ನು ದೇವರ ಸೇವೆ ಎಂದು ನಂಬಿದ್ದಾರೆ ಇಲ್ಲಿನ ಜನರು. ಅನೇಕ ಜನರು ಇವುಗಳನ್ನು ಮುಸ್ಲಿಮರು ಮಾಡಬಾರದು ಎಂದು ಆಕ್ಷೇಪಿಸಿದರೂ, ಅವರು ಈ ಕಾಯಕವನ್ನು ಶ್ರದ್ಧೆಯಿಂದ ಮುಂದುವರಿಸಿದ್ದಾರೆ.
ನಮಾಜ್ ಮಾಡುವ ಕೈಗಳು ಇಲ್ಲಿ ದೇವರ ಮಂಟಪವನ್ನು ಮಾಡುತ್ತವೆ. ಈ ಕಾಯಕವು ಧರ್ಮದ ಹೆಸರಿನಲ್ಲಿ ಹಿಂದೂ ಮತ್ತು ಮುಸ್ಲಿಮರಲ್ಲಿ ದ್ವೇಷದ ಬೀಜ ಬಿತ್ತುವವರಿಗೆ ಕಪಾಳಕ್ಕೆ ಹೊಡೆದಂತಿದೆ. ಈ ಕುಶಲಕರ್ಮಿಗಳ ಕೆಲಸವು ಸಮಾಜಕ್ಕೆ ಐಕ್ಯತೆಯ ಸಂದೇಶ ನೀಡುತ್ತಿದೆ.