ನವದಹೆಲಿ: ಉತ್ತರಪ್ರದೇಶದಲ್ಲಿ 2022ಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಕಸರತ್ತು ಆರಂಭಿಸಿದೆ. ಯುಪಿಗಾಗಿ ಪ್ರಣಾಳಿಕೆ ಸಮಿತಿ, ಸದಸ್ಯತ್ವ ಸಮಿತಿ, ಕಾರ್ಯಕ್ರಮಗಳ ಜಾರಿ ಸಮಿತಿ, ತರಬೇತಿ ಸಮಿತಿ, ಪಂಚಾಯ್ತಿ ಚುನಾವಣೆ ಸಮಿತಿ ಹಾಗೂ ಮಾಧ್ಯಮ ಸಮಿತಿಗಳನ್ನು ರಚಿಸಿ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಅಚ್ಚರಿ ಎಂದರೆ ಜನಪ್ರಿಯ ನಾಯಕರಾದ ಜಿತಿನ್ ಪ್ರಸಾದ್ ಮತ್ತು ರಾಜ್ ಬಬ್ಬರ್ ಅವರನ್ನು ಈ ಸಮಿತಿಗಳಿಂದ ಕೈ ಬಿಡಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಹಿರಿಯ ನಾಯಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಇವರಲ್ಲಿ ಜಿತಿನ್ ಪ್ರಸಾದ್, ರಾಜ್ ಬಬ್ಬರ್ ಕೂಡ ಸೇರಿದ್ದರು. ಆದರೆ ಇದೇ ಪಟ್ಟಿಯಲ್ಲಿದ್ದ ಗುಲಾಂ ನಬಿ ಅಜಾದ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಜಾದ್ ಅವರಿಗೆ ಸಮಿತಿಗಳಲ್ಲಿ ಸ್ಥಾನ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉತ್ತರಪ್ರದೇಶ ವಿಧಾನಸಭೆ ಚುನಾವಣಾ ಕಾಂಗ್ರೆಸ್ ಸಮಿತಿಗಳಲ್ಲಿ ಪ್ರಮೋದ್ ತಿವಾರಿ, ಸಲ್ಮಾನ್ ಖುರ್ಷಿದ್, ಪಿಎಲ್ ಪುನಿಯಾ ಅವರಿಗೆ ಸ್ಥಾನ ನೀಡಲಾಗಿದೆ. ಹಿರಿಯ ನಾಯಕರಾದ ಆರ್ಪಿಎನ್ ಸಿಂಗ್, ರಾಜೀವ್ ಶುಕ್ಲಾ ಅವರನ್ನು ಕಮಿಟಿಗಳಿಂದ ಹೊರಗಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಆದರೆ ಈ ಲೀಡರ್ಗಳು ಉತ್ತರಪ್ರದೇಶದ ರಾಜಕೀಯದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಯುಪಿ ಕಾಂಗ್ರೆಸ್ ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ ಅತಿ ಮುಖ್ಯವಾದ ಸಮಿತಿಗಳಲ್ಲಿ ಜಿತಿನ್ ಪ್ರಸಾದ್ ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿದೆ. ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ಜಿತಿನ್ ಸಚಿವರಾಗಿದ್ದರು. ಕಾಂಗ್ರೆಸ್ನ ಕಾರ್ಯಕಾರಿಣಿ ಸಮಿತಿಯ ವಿಶೇಷ ಆಹ್ವಾನಿತರು ಕೂಡ ಆಗಿದ್ದರು.