ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನವೆಂಬರ್ 26ರಂದು ರೈತ ಸಂಘಟನೆಗಳು ಹಮ್ಮಿಕೊಂಡಿರುವ 'ದೆಹಲಿ ಚಲೋ' ಕರೆಯನ್ನು ಬೆಂಬಲಿಸುವಂತೆ ಪಕ್ಷದ ದೆಹಲಿ ಘಟಕ ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್ಜಿಎಂಸಿ)ಯನ್ನು ಶಿರೋಮಣಿ ಅಕಾಲಿ ದಳ (ಎಸ್ಎಡಿ) ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಕೋರಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಎನ್ಡಿಎಯಿಂದ ಹೊರ ಬಂದ ನಂತರ ರೈತರಿಗೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡುವಂತೆ ರಾಷ್ಟ್ರ ರಾಜಧಾನಿಯಲ್ಲಿರುವ ತಮ್ಮ ಕಾರ್ಯಕರ್ತರಿಗೆ ಎಸ್ಎಡಿ ಕರೆ ನೀಡಿದೆ. ರಾಷ್ಟ್ರೀಯ ಸಂವಿಧಾನ ದಿನವಾದ ನವೆಂಬರ್ 26ರಂದು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಅಕಾಲಿ ದಳದ ನೇತೃತ್ವದಲ್ಲಿ ರೈತರು ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.
ಎಸ್ಎಡಿ ದೆಹಲಿ ಘಟಕದ ಅಧ್ಯಕ್ಷ ಹರ್ಮೀತ್ ಸಿಂಗ್ ಕಲ್ಕಾ ಮತ್ತು ಡಿಎಸ್ಜಿಎಂಸಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾಗೆ ಕರೆ ಮಾಡಿರುವ ಸುಖಬೀರ್ ಸಿಂಗ್ ಬಾದಲ್, ನವೆಂಬರ್ 26 ಮತ್ತು 27ರಂದು ದೆಹಲಿಯಲ್ಲಿ ರೈತರಿಗೆ ಲ್ಯಾಂಗರ್ ಸೇರಿದಂತೆ ಇತರ ಅಗತ್ಯ ವ್ಯವಸ್ಥೆಗಳನ್ನು ಏರ್ಪಡಿಸುವಂತೆ ಕೋರಿದ್ದಾರೆ.
ನಾನು ಶಿರೋಮಣಿ ಅಕಾಲಿ ದಳದ ದೆಹಲಿ ಘಟಕ ಮತ್ತು ಡಿಎಸ್ಜಿಎಂಸಿ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ. ಕೇಂದ್ರದ ಕಾನೂನುಗಳ ವಿರುದ್ಧ ಹೋರಾಡುವ ರೈತರಿಗೆ ಸಾಧ್ಯವಿರುವ ಎಲ್ಲಾ ಸಹಾಯ ನೀಡುವಂತೆ ವಿನಂತಿಸಿದ್ದೇನೆ. ಎಸ್ಎಡಿಯ ಎಲ್ಲಾ ಕಾರ್ಯಕರ್ತರಿಗೆ, ರೈತರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಬಾದಲ್ ಹೇಳಿದ್ದಾರೆ.