ಬುಲಂದ್ಶಹರ್(ಉತ್ತರ ಪ್ರದೇಶ): ರಸ್ತೆ ಬದಿ ಮಲಗಿದ್ದ ಜನರ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ ಒಂದೇ ಕುಟುಂಬದ 7 ಮಂದಿ ಸಾವಿಗೀಡಾಗಿದ್ದಾರೆ.
ನಾಲ್ವರು ಮಹಿಳೆಯರು ಮತ್ತು 3 ಮಕ್ಕಳು ಸೇರಿದಂತೆ 7 ಮಂದಿ ಸ್ಥಳದಲ್ಲೆ ಅಸುನೀಗಿದ್ದಾರೆ. ಮೃತರೆಲ್ಲ ಪವಿತ್ರ ಗಂಗಾ ಸ್ನಾನಕ್ಕಾಗಿ ನರೋರಾ ಘಾಟ್ಗೆ ತೆರಳಿದ್ದರು ಅಲ್ಲಿಂದ ಹತ್ರಾಸ್ಗೆ ವಾಪಸಾಗಲು ಮುಂದಾಗಿದ್ದರು. ಆದ್ರೆ ಬಸ್ ಸಿಗದ ಕಾರಣ ರಸ್ತೆ ಬದಿಯಲ್ಲಿ ಮಲಗಿದ್ದರು.
ಇಂದು ಬೆಳ್ಳಂಬೆಳಗ್ಗೆ ಯಮಸ್ವರೂಪಿಯಾಗಿ ಬಂದ ಖಾಸಗಿ ಬಸ್, ಮಲಗಿದ್ದರವರ ಮೇಲೆ ಹರಿದ ಪರಿಣಾಮ ಎಲ್ಲ 7 ಜನ ಸಾವಿಗೀಡಾಗಿದ್ದಾರೆ. ಅಪಘಾತದ ನಂತರ ಬಸ್ ಚಾಲಕ ಪರಾರಿಯಾಗಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.