ನವದೆಹಲಿ: ಅಭೂತಪೂರ್ವ ಗೆಲುವಿನೊಂದಿಗೆ ಎರಡನೇ ಬಾರಿಗೆ ಪ್ರಧಾನಿ ಹುದ್ದೆಗೇರಿದ ನರೇಂದ್ರ ಮೋದಿ ಸರ್ಕಾರಕ್ಕೆ ಇಂದು ಶತದಿನದ ಸಂಭ್ರಮ. ಆದರೆ ಸೆಂಚುರಿ ಗಡಿಯಲ್ಲಿ ಆರ್ಥಿಕತೆ ಹಳ್ಳ ಹಿಡಿದಿರುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.
2014ರ ಚುನಾವಣೆಗಿಂತಲೂ ದೊಡ್ಡಮಟ್ಟದಲ್ಲಿ 2019ರ ಎಲೆಕ್ಷನ್ನಲ್ಲಿ ಮೋದಿ ಪರಾಕ್ರಮ ಮೆರೆದಿದ್ದರು. ಪರಿಣಾಮ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನವೂ ಇಲ್ಲದಂತಾಗಿತ್ತು. ನೂರು ದಿನದ ಸಂದರ್ಭದಲ್ಲಿ ಮೋದಿ ಸರ್ಕಾರದ ಬಹುಮುಖ್ಯ ನಡೆಗಳ ಬಗೆಗಿನ ಒಂದು ನೋಟ ಇಲ್ಲಿದೆ.
ಅಚ್ಚೇ ದಿನಗಳನ್ನು ಹೊತ್ತು ತಂದ ಮೋದಿ 2.0 ಸರ್ಕಾರಕ್ಕೆ 100 ದಿನ: ಎತ್ತ ಸಾಗುತ್ತಿದೆ 'ಅರ್ಥ'ವ್ಯವಸ್ಥೆ?
ತ್ರಿವಳಿ ತಲಾಖ್ ರದ್ದು:
ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಎರಡನೇ ಅವಧಿಯಲ್ಲಿ ಮೋದಿ ತ್ರಿವಳಿ ತಲಾಖ್ ರದ್ದುಗೊಳಿಸಿದ್ದರು. ಇದು ಮೋದಿ ಸರ್ಕಾರದ ನೂರು ದಿನ ಪ್ರಮುಖ ಸಾಧನೆ ಎಂದೇ ಪರಿಗಣಿಸಲಾಗಿದೆ.
370ನೇ ವಿಧಿ ರದ್ದು:
ಮೋದಿ ಸರ್ಕಾರದ ದೃಢ ನಿರ್ಧಾರದಲ್ಲಿ ಕಾಶ್ಮೀರಿಗರಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿತ್ತು. ಜಮ್ಮು ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಿ, ನಿಷೇಧಾಜ್ಞೆಯನ್ನು ಜಾರಿಗೊಳಿಸಿ ವಿಶೇಷ ಸ್ಥಾನಮಾನವನ್ನು ಹಿಂಪಡೆದಿತ್ತು. ವಿಧಿ ರದ್ದು ಹಾಗೂ ನಂತರದಲ್ಲಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ಕಾಪಾಡುವಲ್ಲಿ ಮೋದಿ ಸರ್ಕಾರದ ನಡೆ ಪ್ರಶಂಸನೀಯ..!
ಭಯೋತ್ಪಾದನಾ ವಿರೋಧಿ ಕಾನೂನು:
ಭಯೋತ್ಪಾದನೆಯ ವಿರುದ್ಧ ಜಾಗತಿಕವಾಗಿ ದನಿ ಎತ್ತುತ್ತಿರುವ ಪ್ರಧಾನಿ ಮೋದಿ ಸರ್ಕಾರ ಇದೇ ವಿಚಾರದಲ್ಲಿ ಮಹತ್ವದ ಕಾನೂನನ್ನು ಎರಡನೇ ಅವಧಿಯಲ್ಲಿ ತಂದಿತ್ತು. ಉಗ್ರ ಎಂದು ಘೋಷಿಸಲ್ಪಟ್ಟ ವ್ಯಕ್ತಿಯ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕುವ ಅವಕಾಶ ಈ ನೂತನ ಕಾನೂನು ನೀಡಿದೆ.
ಏಳು ವಿದೇಶಿ ಪ್ರವಾಸ:
ಮೊದಲ ಅವಧಿಯಲ್ಲಿ ಪ್ರಧಾನಿ ಮೋದಿ ಹಲವಾರು ದೇಶಗಳನ್ನು ಸುತ್ತಿ ಬಂದಿದ್ದರು. ಇದೇ ವಿಚಾರ ಪ್ರತಿಪಕ್ಷಗ ಟೀಕೆಗೆ ಆಹಾರವಾಗಿತ್ತು. ಆದರೆ ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಮೋದಿ ತಮ್ಮ ಎರಡನೇ ಕಾರ್ಯಾವಧಿಯಲ್ಲಿ ನೂರು ದಿನದಲ್ಲಿ ಏಳು ದೇಶಕ್ಕೆ ಭೇಟಿ ನೀಡಿದ್ದಾರೆ.
ದ್ವೀಪ ರಾಷ್ಟ್ರ ಮಾಲ್ಡೀವ್ಸ್ನಿಂದ ಆರಂಭವಾದ ವಿದೇಶ ಪ್ರವಾಸದಲ್ಲಿ ನಂತರ ಶ್ರೀಲಂಕಾ, ಭೂತಾನ್, ಯುಎಇ, ಬಹರೈನ್, ಫ್ರಾನ್ಸ್ ಹಾಗೂ ರಷ್ಯಾ ದೇಶಗಳಿಗೆ ಹೋಗಿ ಬಂದಿದ್ದಾರೆ.
ಬ್ಯಾಂಕ್ಗಳ ಮಹಾವಿಲೀನ:
ರಾಜ್ಯ ಸ್ವಾಯತ್ತತೆಯ ಹತ್ತು ಬ್ಯಾಂಕ್ಗಳನ್ನು ವಿಲೀನ ಮಾಡಿ ಮಹತ್ವದ ಹೆಜ್ಜೆ ಇರಿಸಿದೆ. ಬ್ಯಾಂಕಿಂಗ್ ಸೌಲಭ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹೇಳಿದೆ.