ಪುಣೆ (ಮಹಾರಾಷ್ಟ್ರ): ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಈ ವರ್ಷ ಮಳೆಗಾಲದಲ್ಲಿ ಸಹ್ಯಾದ್ರಿ ಬೆಟ್ಟಗಳು ಹಚ್ಚಹಸಿರಿನೊಂದಿಗೆ ಕಂಗೊಳಿಸುತ್ತಿದ್ದ ಕಣ್ಮನ ಸೆಳೆಯುತ್ತಿದೆ. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.
ಸಹ್ಯಾದ್ರಿಯ ಹಲವು ಕೋಟೆಗಳು ಮತ್ತು ವಿವಿಧ ಸ್ಥಳಗಳು ಹಾಗೂ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಸಾಕಷ್ಟು ಸೆಲ್ಫಿ ಪಾಯಿಂಟ್ಗಳು ಸಹ ಸಹ್ಯಾದ್ರಿ ತಪ್ಪಲಿನಲ್ಲಿವೆ. ಜೊತೆಗೆ ಈ ಬಾರಿ ಪ್ರವಾಸಿಗರು ಹೊಸ ಸ್ಥಳಗಳಿಗೂ ಭೇಟಿ ನೀಡಿ ಆನಂದಿಸುತ್ತಿದ್ದಾರೆ.
ಪುಣೆ ಜಿಲ್ಲೆಯ ಮುಲ್ಶಿ ತಾಲೂಕಿನ ಧಮನ್ ಓಹಲ್ ಗ್ರಾಮದಲ್ಲಿ ಲಿಂಗ್ಯಾ ಎಂಬ ಘಾಟ್ ಇದೆ. ಈ ಘಾಟ್ ಪ್ರದೇಶದಲ್ಲಿ ಎತ್ತರದ ಶಿಖರ ಇದೆ. ಇದನ್ನು ಸ್ಥಳೀಯ ಗ್ರಾಮಸ್ಥರು ದೇವರೆಂದು ಪರಿಗಣಿಸಿ, ಪೂಜಿಸುತ್ತಾರೆ. ಅಲ್ಲದೇ, ಬೇರೆ ಕಡೆಯಿಂದ ಬರುವ ಪ್ರವಾಸಿಗರು ಸಹ ಇದನ್ನು ಗೌರವ ಭಾವನೆಯಿಂದ ನೋಡುತ್ತಾರೆ.
ಇದೀಗ ಈ ಶಿಖರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಹಲವರು ಈ ಶಿಖರವನ್ನು ಏರಿ ಸಂಭ್ರಮಿಸುತ್ತಾರೆ. ಆದರೆ, ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆ ಅದರ ಪಾವಿತ್ರ್ಯತೆಗೂ ಧಕ್ಕೆ ಉಂಟು ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ.
ಶಿಖರ ತುಂಬಾ ಕಿರಿದಾಗಿದ್ದು, ಪ್ರಾಣವನ್ನೇ ಪಣಕ್ಕಿಟ್ಟು ಮೇಲೇರಬೇಕಾಗುತ್ತದೆ. ಅನೇಕ ಪ್ರವಾಸಿಗರು ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ಶಿಖರ ಏರುವ ದುಸ್ಸಾಹಸ ಮಾಡುತ್ತಿದ್ದಾರೆ. ಹೀಗಾಗಿಯೇ ಇದು ಸ್ಥಳೀಯರ ಚಿಂತೆಗೂ ಕಾರಣವಾಗಿದೆ.
ಶಿಖರ ಏರಲು ಸೂಕ್ತವಾದ ಯಾವುದೇ ಭದ್ರತೆ ಇಲ್ಲ. ಪ್ರವಾಸಿಗರು ಕೆಳಗೆ ಬಿದ್ದರೆ, ದೊಡ್ಡ ಅಪಘಾತವೂ ಸಂಭವಿಸಬಹುದು. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.
ಇದನ್ನೂ ಓದಿ: ಕೊಬ್ಬಿದ ಗೂಳಿ, ಬೀದಿಯಲ್ಲಿದ್ದವರ ಮೇಲೆ ದಾಳಿ.. 10 ಮಂದಿಗೆ ಗಾಯ