ಮತದಾನದ ಬಗ್ಗೆ ಶತಾಯುಷಿಗಳು ಹೇಳಿದ್ದೇನು? ಬೆಳಗಾವಿ: 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯು ರಾಜ್ಯ ರಾಜಕಾರಣದಲ್ಲಿ ಮಹತ್ವದ ಸ್ಥಾನ ಹೊಂದಿದೆ. ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಜಿಲ್ಲೆಯಲ್ಲಿ 1,259 ಶತಾಯುಷಿ ಮತದಾರರು ಮತ ಚಲಾಯಿಸಲು ಸಜ್ಜಾಗಿದ್ದಾರೆ.
ಒಟ್ಟು 1,259 ಮತದಾರ ಪೈಕಿ ಕುಡಚಿ ಕ್ಷೇತ್ರದಲ್ಲಿ 196 ಶತಾಯುಷಿ ಮತದಾರರಿದ್ದಾರೆ. ಈ ಮೂಲಕ ಕುಡಚಿ 100 ವರ್ಷ ದಾಟಿದ ಮತದಾರರ ಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇನ್ನುಳಿದಂತೆ ರಾಯಬಾಗದಲ್ಲಿ 176, ಬೆಳಗಾವಿ ದಕ್ಷಿಣದಲ್ಲಿ 116, ಕಾಗವಾಡದಲ್ಲಿ 108, ಅರಬಾವಿಯಲ್ಲಿ 97 ಹಾಗೂ ಬೆಳಗಾವಿ ಗ್ರಾಮೀಣದಲ್ಲಿ 83, ಬೆಳಗಾವಿ ಉತ್ತರದಲ್ಲಿ 79, ಗೋಕಾಕದಲ್ಲಿ 73, ರಾಮದುರ್ಗದಲ್ಲಿ 56, ಯಮಕನಮರಡಿದಲ್ಲಿ 50 ಮಂದಿ ಶತಾಯುಷಿ ಮತದಾರರಿದ್ದಾರೆ.
ಹುಕ್ಕೇರಿ ಹಾಗೂ ಚಿಕ್ಕೋಡಿ - ಸದಲಗಾದಲ್ಲಿ ತಲಾ 45, ಬೈಲಹೊಂಗಲದಲ್ಲಿ 40, ಕಿತ್ತೂರಿನಲ್ಲಿ 27, ಸವದತ್ತಿಯಲ್ಲಿ 25, ನಿಪ್ಪಾಣಿಯಲ್ಲಿ 16, ಖಾನಾಪುರದಲ್ಲಿ 15, ಅಥಣಿಯಲ್ಲಿ 12 ಶತಾಯುಷಿ ಮತದಾರರಿದ್ದಾರೆ. 80 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಹಾಗೂ ವಿಶೇಷಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಜಿಲ್ಲೆಯ ಶತಾಯುಷಿಗಳಿಗೆ ಮತದಾನ ಮಾಡುವುದಕ್ಕೆ ತೊಂದರೆಯಾಗುವುದಿಲ್ಲ. ಜಿಲ್ಲೆಯಲ್ಲಿ 90 ರಿಂದ 99 ವಯಸ್ಸಿನವರು 17,119 ಮತದಾರರಿದ್ದಾರೆ. 80 ರಿಂದ 89 ವರ್ಷದ ಮತದಾರರು 80,259 ಹಾಗೂ 70 ರಿಂದ 79 ವಯಸ್ಸಿನ 2,31,628 ಮತದಾರರು ಇರೋದು ಜಿಲ್ಲೆಯ ಮತ್ತೊಂದು ವಿಶೇಷತೆಯಾಗಿದೆ.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಈಟಿವಿ ಭಾರತ್ ಜೊತೆಗೆ ಮಾತನಾಡಿ, ಶತಾಯುಷಿಗಳು, 85 ವರ್ಷ ಮೇಲ್ಪಟ್ಟ ಮತದಾರರು ಮತದಾನಕ್ಕೆ ತುಂಬಾ ಉತ್ಸುಕರಾಗಿದ್ದಾರೆ. ನಡೆದಾಡಲು ಆಗದವರಿಗೆ ಮನೆಯಿಂದಲೇ ಮತದಾನಕ್ಕೆ ವ್ಯವಸ್ಥೆ ಮಾಡಿದ್ದೇವೆ. ಅದೇ ರೀತಿ ಮತಗಟ್ಟೆಗೆ ಬಂದು ಮತ ಹಾಕುವವರಿಗೂ ಪ್ರೋತ್ಸಾಹಿಸುತ್ತೇವೆ ಎಂದು ತಿಳಿಸಿದರು.
ಮತ ಹಾಕಲು ತುದಿಗಾಲ ಮೇಲೆ ನಿಂತ ಶತಾಯುಷಿ: ಈಟಿವಿ ಭಾರತ್ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಮತದಾರ ರಾಜೇಂದ್ರ ಕಲಘಟಗಿ ಮಾತನಾಡಿ, ನನಗೆ ಈಗ 104 ವರ್ಷ. 1947ರ ನಂತರ ನಡೆದ ಎಲ್ಲ ಚುನಾವಣೆಗಳಲ್ಲಿ ಮತದಾನ ಮಾಡಿದ್ದೇನೆ. ಈಗ ಲೋಕಸಭೆ ಚುನಾವಣೆ ಬಂದಿದ್ದು, ಇದು ನಮ್ಮ ಪ್ರಜಾಪ್ರಭುತ್ವದ ಹಬ್ಬ. ಹಾಗಾಗಿ, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಲೇಬೇಕು. ನಮ್ಮ ಭಾರತ ದೇಶವನ್ನು ಮುಂದೆ ತೆಗೆದುಕೊಂಡು ಹೋಗುವ ವ್ಯಕ್ತಿಗೆ ಮತ ಹಾಕಿ ಗೆಲ್ಲಿಸಿ. ಗೆದ್ದವರು ದೆಹಲಿಯಲ್ಲಿ ಕುಳಿತುಕೊಳ್ಳುವ ಬದಲು ತಮ್ಮನ್ನು ಆಯ್ಕೆ ಮಾಡಿದ ಮತದಾರರ ಸಮಸ್ಯೆ ಆಲಿಸಿ, ಪರಿಹರಿಸಬೇಕು. ಮತದಾನ ದಿನ ಯಾವಾಗ ಬರುತ್ತೆ ಎಂದು ತುದಿಗಾಲ ಮೇಲೆ ನಿಂತಿದ್ದೇನೆ ಎಂದರು.
ನೂರಕ್ಕೆ ನೂರರಷ್ಟು ಮತದಾನ ದಾಖಲಾಗಬೇಕು:ಮತ್ತೋರ್ವ ಶತಾಯುಷಿ ಮತದಾರ ಹಾಗೂ ಮಾಜಿ ಶಾಸಕ ಪರುಶರಾಮ ನಂದಿಹಳ್ಳಿ ಮಾತನಾಡಿ, ದೇಶದ ಭವಿಷ್ಯ ರೂಪಿಸಲು ಇರುವ ಏಕೈಕ ಸಾಧನ ಎಂದರೆ ಅದು ಮತದಾನ. ಮತದಾನದ ಮಹತ್ವದ ಕುರಿತು ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕು. ಅಭಿವೃದ್ಧಿ ಮಾಡುವ ಪಕ್ಷ, ಚಾರಿತ್ರ್ಯವುಳ್ಳ ಅಭ್ಯರ್ಥಿಗೆ ಮತ ಚಲಾಯಿಸಬೇಕು. ನೂರಕ್ಕೆ ನೂರ ರಷ್ಟು ಮತದಾನ ದಾಖಲಾಗಬೇಕು ಎಂದು ಮತದಾರರಿಗೆ ಕರೆ ನೀಡಿದರು.
ಇದನ್ನೂ ಓದಿ:ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಮೊದಲ ಬಾರಿಗೆ ಹೆಚ್ಚು ಮಹಿಳೆಯರಿಗೆ ಮಣೆ; ಕಾಂಗ್ರೆಸ್ನಿಂದ 6, ಬಿಜೆಪಿಯಿಂದ ಇಬ್ಬರಿಗೆ ಟಿಕೆಟ್ - women candidates