ಕರ್ನಾಟಕ

karnataka

ETV Bharat / state

ನಂಜನಗೂಡಲ್ಲಿ ಏಪ್ರಿಲ್ 9ರಂದು ಪಂಚ ಮಹಾರಥೋತ್ಸವ, 11ರಂದು ತೆಪ್ಪೋತ್ಸವ - NANJANGUD SRIKANTESHWARA TEMPLE

'ದಕ್ಷಿಣಕಾಶಿ' ಖ್ಯಾತಿಯ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಏಪ್ರಿಲ್ 9ರಂದು ಪಂಚ ಮಹಾರಥೋತ್ಸವ ಮತ್ತು ಏ.11ರಂದು ತೆಪ್ಪೋತ್ಸವ ಜರುಗಲಿದೆ. ಲಕ್ಷಾಂತರ ಜನ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

pancha-maharathotsava-on-april-9th-and-theppotsava-on-april-11th-in-nanjangudu-temple
ಶ್ರೀಕ್ಷೇತ್ರ ನಂಜನಗೂಡು (ಸಂಗ್ರಹ ಚಿತ್ರ ETV Bharat)

By ETV Bharat Karnataka Team

Published : Feb 27, 2025, 4:40 PM IST

ಮೈಸೂರು:ಏಪ್ರಿಲ್ 9ರಂದು ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಪಂಚ ಮಹಾರಥೋತ್ಸವ ಹಾಗೂ ಏಪ್ರಿಲ್ 11ರಂದು ತೆಪ್ಪೋತ್ಸವ ನಡೆಯಲಿದೆ. ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಸೂಚನೆ ನೀಡಿದ್ದಾರೆ.

ಗುರುವಾರ ದೇವಾಲಯದ ದಾಸೋಹ ಭವನದಲ್ಲಿ ಶ್ರೀಕಂಠೇಶ್ವರ ದೇವಾಲಯದ ಪಂಚ ಮಹಾರಥೋತ್ಸವ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

"ಏಪ್ರಿಲ್ 9ರಂದು ನಡೆಯುವ ಪಂಚ ಮಹಾರಥೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಸಿಸಿಟಿವಿ ಕ್ಯಾಮರಾ ಅಳವಡಿಸಿ, ತಾತ್ಕಾಲಿಕ ವಾಚ್ ಟವರ್​​ ನಿರ್ಮಾಣ ಮಾಡಬೇಕು. ಸುಗಮ ವಾಹನ ಸಂಚಾರಕ್ಕೆ ಬ್ಯಾರಿಕೇಡಿಂಗ್ ವ್ಯವಸ್ಥೆ, ಮಾಹಿತಿ ಫಲಕಗಳು ಹಾಗೂ ಸ್ವಾಗತ ಕಮಾನು ಅಳವಡಿಕೆ ಮಾಡಬೇಕು" ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

"ರಥಗಳು ಚಲಿಸುವ ರಸ್ತೆಯಲ್ಲಿ ಅಡ್ಡಲಾಗಿರುವ ವಿದ್ಯುತ್ ತಂತಿಗಳನ್ನು ತೆಗೆದು, ರಥೋತ್ಸವ ಮುಗಿದ ನಂತರ ಪುನರ್ ಜೋಡಣೆ ಮಾಡಬೇಕು. ರಥೋತ್ಸವ ಮತ್ತು ತೆಪ್ಪೋತ್ಸವ ನಡೆಯುವ ದಿನಗಳಂದು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು" ಎಂದು ಚೆಸ್ಕಾಂ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.

"ರಥೋತ್ಸವದ ಪೂರ್ವಭಾವಿಯಾಗಿ 5 ರಥಗಳನ್ನು ತಾಂತ್ರಿಕವಾಗಿ ಪರಿಶೀಲಿಸಿ, ದುರಸ್ತಿ ಅಗತ್ಯವಿದ್ದರೆ ವರದಿ ನೀಡಬೇಕು ಹಾಗೂ ರಥ ಎಳೆಯಲು ಯೋಗ್ಯವಾಗಿರುವ ಬಗ್ಗೆ ದೃಢೀಕರಣ ಕೊಡಬೇಕು. ರಥ ಚಲಿಸುವ ರಸ್ತೆಗಳಲ್ಲಿ ಹಳ್ಳ, ದಿಣ್ಣೆಗಳು ಇದ್ದರೆ ಸಮತಟ್ಟು ಮಾಡಬೇಕು" ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ದರ್ಶನ್ ಧ್ರುವನಾರಾಯಣ್ ನೇತೃತ್ವದಲ್ಲಿ ಸಭೆ (ETV Bharat)

"ರಥೋತ್ಸವ ಪ್ರಯುಕ್ತ ಲಕ್ಷಾಂತರ ಭಕ್ತಾದಿಗಳು ಆಗಮಿಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸುಸಜ್ಜಿತ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ತೆಪ್ಪೋತ್ಸವ ದಿನದಂದು ಕಪಿಲಾ ನದಿ ತೀರದಲ್ಲಿ ಭಕ್ತಾದಿಗಳ ಸುರಕ್ಷತಾ ದೃಷ್ಟಿಯಿಂದ ಮುಳುಗು ತಜ್ಞರೊಂದಿಗೆ ಬೋಟ್​​ಗಳ ವ್ಯವಸ್ಥೆ ಮಾಡಿಕೊಳ್ಳಬೇಕು" ಎಂದರು.

ಅಪರ ಜಿಲ್ಲಾಧಿಕಾರಿ ಸೂಚನೆ: "ವಾಹನಗಳ ನಿಲುಗಡೆಗೆ ಹಾಗೂ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ರಥೋತ್ಸವಕ್ಕೆ ಬರುವ ಜನಸಂಖ್ಯೆಯ ಬಗ್ಗೆ ಅರಿವಿರಬೇಕು. ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಮಾಡಬೇಕು. ಒಂದು ಇಲಾಖೆಯವರು ಇನ್ನೊಂದು ಇಲಾಖೆಯ ಮೇಲೆ ಹೇಳುವುದನ್ನು ಬಿಡಿ. ಎಲ್ಲರೂ ಒಟ್ಟುಗೂಡಿ ರಥೋತ್ಸವಕ್ಕೆ ಅದ್ದೂರಿ ಸಿದ್ಧತೆ ಮಾಡಿಕೊಳ್ಳಿ. ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಜಿಲ್ಲಾಡಳಿತ ವತಿಯಿಂದ ನೀಡಲಾಗುವುದು. ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು" ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಎಚ್ಚರಿಕೆ ನೀಡಿದರು.

"ರಥೋತ್ಸವ ದಿನದಂದು ಸಂಘ ಸಂಸ್ಥೆಗಳು ಉಚಿತವಾಗಿ ನೀಡುವ ಪ್ರಸಾದ ವಿತರಣೆಗೆ ಅನುಮತಿ ಪಡೆಯಬೇಕು. ಪ್ರಸಾದ ವಿತರಣೆಗೆ ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಭಕ್ತಾದಿಗಳ ಸೌಕರ್ಯಕ್ಕಾಗಿ ಹೆಚ್ಚುವರಿ ಬಸ್​​ಗಳ ವ್ಯವಸ್ಥೆ ಮಾಡಬೇಕು. ತಾತ್ಕಾಲಿಕ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು" ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಕಡಲತೀರಕ್ಕೆ ಪಲ್ಲಕ್ಕಿಯಲ್ಲಿ ತಂದು ದೇವರುಗಳಿಗೆ ಸ್ನಾನ ; ಸಮುದ್ರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು

ABOUT THE AUTHOR

...view details