ಬೆಳಗಾವಿ:ಹೊಸ ವಾಹನ ಖರೀದಿದಾರರಿಗೆ ಹೆಚ್ಚುವರಿಯಾಗಿ ಉಪಕರ (ತೆರಿಗೆ) ಕಟ್ಟುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕ ಪರಿಷತ್ನಲ್ಲಿ ಅಂಗೀಕಾರಗೊಂಡಿತು.
ವಿಧಾನಪರಿಷತ್ನಲ್ಲಿ ಬುಧವಾರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ವಿಧೇಯಕಕ್ಕೆ ಚರ್ಚೆ ವೇಳೆ, ''ದ್ವಿಚಕ್ರ ವಾಹನಕ್ಕೆ 500 ರೂ., ನಾಲ್ಕು ಚಕ್ರಗಳ ವಾಹನಕ್ಕೆ 1 ಸಾವಿರ ರೂ. ಉಪಕರ ವಿಧಿಸುವುದು ಸರಿಯಲ್ಲ. ಇದರಿಂದ ವಾಹನ ಖರೀದಿದಾರರಿಗೆ ಹೊರೆಯಾಗುತ್ತದೆ. ಇದನ್ನು ವಾಪಸ್ ಪಡೆಯಬೇಕು'' ಎಂದು ವಿಪಕ್ಷ ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್, ''ದ್ವಿಚಕ್ರ ವಾಹನಕ್ಕೆ 500 ರೂ., ನಾಲ್ಕು ಚಕ್ರಗಳ ವಾಹನಕ್ಕೆ 1 ಸಾವಿರ ರೂ. ಉಪಕರ ವಿಧಿಸಿರುವುದು ಒಮ್ಮೆ ಮಾತ್ರ. ಇದರಿಂದ ವಾರ್ಷಿಕ 150 ಕೋಟಿ ರೂ. ಸಂಗ್ರಹವಾಗಲಿದೆ. ಈ ಹಣವನ್ನು ಅಸಂಘಟಿತ ವಲಯದ ಸಾರಿಗೆ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ'' ಎಂದು ಸದನಕ್ಕೆ ಸ್ಪಷ್ಟಪಡಿಸಿದರು.