ಮಂಗಳೂರು:ಇಲ್ಲಿನ ಕೋಡಿಕಲ್ ವಿವೇಕಾನಂದ ನಗರದಲ್ಲಿ ಕಳ್ಳರ ತಂಡವೊಂದು ರಾತ್ರಿ ವೇಳೆ ಮನೆ ಮಂದಿ ಮಲಗಿದ್ದಾಗಲೇ ಕಿಟಕಿ ಸರಳು ತುಂಡರಿಸಿ ಮನೆಯೊಳಗೆ ನುಗ್ಗಿ 10 ಸಾವಿರ ರೂ. ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶನಿವಾರ ನಸುಕಿನ ವೇಳೆ ಉರ್ವ ಠಾಣಾ ವ್ಯಾಪ್ತಿಯ ಕೋಡಿಕಲ್ ವಿವೇಕಾನಂದ ನಗರ ನಿವಾಸಿ ಪ್ರದೀಪ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯವರು ಬೆಡ್ರೂಂನಲ್ಲಿ ಮಲಗಿದ್ದಾಗಲೇ ಕಿಟಕಿ ಸರಳು ತುಂಡರಿಸಿದ ಕಳ್ಳರ ಗುಂಪು ಮನೆಯೊಳಗೆ ನುಗ್ಗಿದೆ. ಬಳಿಕ ಕಪಾಟಿನಲ್ಲಿಟ್ಟಿದ್ದ ಹಣ ಎಗರಿಸಿ ಪರಾರಿಯಾಗಿದ್ದಾರೆ.
ಕಳ್ಳರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಐವರಿದ್ದ ತಂಡ ಮುಖಕ್ಕೆ ಮಾಸ್ಕ್ ಧರಿಸಿ ಒಂದೇ ಮಾದರಿಯ ವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳ್ಳರು ಮನೆಯ ಅಂಗಳ ಪ್ರವೇಶಿಸುವ ಮೊದಲು ಬೀದಿನಾಯಿಗಳು ಬೊಗಳುತ್ತಾ ಬಂದಿದೆ. ಆಗ ತಂಡದಲ್ಲೊಬ್ಬ ನಾಯಿಯನ್ನು ಓಡಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಿನ್ನಾಭರಣ ಕಳವು:ಮತ್ತೊಂದು ಪ್ರಕರಣದಲ್ಲಿ,ನಗರದ ಉಳ್ಳಾಲ ಠಾಣಾ ವ್ಯಾಪ್ತಿಯ ಧರ್ಮನಗರದಲ್ಲಿ ಮನೆಯೊಂದರ ಗಾಡ್ರೆಜ್ನೊಳಗಿದ್ದ 15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾನೂನಿನ ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ನಿವಾಸಿಗಳಾದ ಶ್ರೇಯಸ್, ತೌಸೀಫ್ ಹಾಗೂ ಉರ್ವ ನಿವಾಸಿ ಪೃಥ್ವಿರಾಜ್ ಬಂಧಿತ ಮೂವರು ಆರೋಪಿಗಳು. ಧರ್ಮನಗರ ನಿವಾಸಿ ಶ್ರೀಧರ್ ಎಂಬವರ ಮನೆಯಲ್ಲಿ ಜೂನ್ 8ರ ಬೆಳಗ್ಗೆ 8ರಿಂದ ಜೂ.16ರ ಮಧ್ಯಾಹ್ನ 12ರ ನಡುವೆ 15 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಉಳ್ಳಾಲ ಠಾಣೆಗೆ ಶ್ರೀಧರ್ ದೂರು ನೀಡಿದ್ದರು.