ಕರ್ನಾಟಕ

karnataka

ETV Bharat / state

ರೇಣುಕಾಸ್ವಾಮಿ ಕೊಲೆ ಕೇಸ್​: ದರ್ಶನ್​ ಜಾಮೀನು ಅರ್ಜಿ ವಜಾ, ಪವಿತ್ರಾಗೂ ಜೈಲೇ ಗತಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​, ನಟಿ ಪವಿತ್ರಾ ಗೌಡಗೆ ಇಂದು ಕೂಡ ಜಾಮೀನು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.

By ETV Bharat Karnataka Team

Published : 4 hours ago

ನಟ ದರ್ಶನ್​
ನಟ ದರ್ಶನ್​ (ETV Bharat)

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇನ್ನು ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.

ಜಾರ್ಮಿನು ಅರ್ಜಿ ಕುರಿತು ಸರ್ಕಾರದ ಅಭಿಯೋಜಕ ಎಸ್​ಪಿಪಿ ಪ್ರಸನ್ನಕುಮಾರ್ ಹಾಗೂ ದರ್ಶನ್ ಪರ ವಕೀಲ ಸಿ. ವಿ. ನಾಗೇಶ್ ಅವರ ಸುದೀರ್ಘ ವಾದ - ಪ್ರತಿವಾದ ಆಲಿಸಿದ್ದ 57ನೇ ಸಿಸಿಹೆಚ್ ನ್ಯಾಯಾಲಯ ಇಂದು ಆದೇಶ ಪ್ರಕಟಿಸಿತು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಪ್ರಕರಣದ ಮೊದಲ ಆರೋಪಿತೆ ಪವಿತ್ರಾ ಗೌಡ, ಎ2 ದರ್ಶನ್, ಎ11 ನಾಗರಾಜ್, ಎ12 ಲಕ್ಷ್ಮಣ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿ, ಎ8 ರವಿಶಂಕರ್ ಹಾಗೂ ಎ13 ದೀಪಕ್​ಗೆ ಜಾಮೀನು ನೀಡಿ ನ್ಯಾಯಾಲಯ ಆದೇಶಿಸಿದೆ. ಅರ್ಜಿ ವಜಾ ಹಿನ್ನೆಲೆಯಲ್ಲಿ ದರ್ಶನ್ ಸೇರಿ ನಾಲ್ವರು ಆರೋಪಿಗಳು ಮುಂದಿನ 14 ದಿನಗಳ ಕಾಲ ಜೈಲಿನಲ್ಲೇ ಇರಬೇಕಾಗಿದೆ. ಇನ್ನು ಜಾಮೀನು ಕೋರಿ ದರ್ಶನ್ ಪರ ವಕೀಲರು ನಾಳೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

ಪ್ರಕರಣದ ಎರಡನೇ ಆರೋಪಿ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರು ಚಾರ್ಜ್ ಶೀಟ್​​ನಲ್ಲಿನ ಲೋಪದೋಷಗಳ ಬಗ್ಗೆ ಪ್ರಬಲ ವಾದಕ್ಕೆ ಸರ್ಕಾರಿ ಪರ ಅಭಿಯೋಜಕ ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಿದ್ದರು. ಸಾಕ್ಷಿಗಳ ಸೃಷ್ಟಿ, ಸಾಂದರ್ಭಿಕ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪೊಲೀಸರು ಹುಟ್ಟುಹಾಕಿದ್ದಾರೆ ಎಂದು ವಾದ ಮಂಡಿಸಿದ್ದರು. ಪವಿತ್ರಾ ಗೌಡ ಪರ ವಕೀಲ ಟಾಮಿ ಸೆಬಾಸ್ಟಿಯನ್ ಅವರು, ತಮ್ಮ ಕಕ್ಷಿದಾರರು ಹತ್ಯೆ ಒಳಸಂಚಿನಲ್ಲಿ ಭಾಗಿಯಾಗಿಲ್ಲ. ಕೃತ್ಯ ನಡೆದ ಸ್ಥಳಕ್ಕೆ ಹೋಗಿ ರೇಣುಕಾಸ್ವಾಮಿಯ ಕಪಾಳಕ್ಕೆ ಹೊಡೆದಿದ್ದರು. ಇದರಿಂದಲೇ ಮರಣವಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ನಮೂದಿಸಿಲ್ಲ. ಹೀಗಾಗಿ ಜಾಮೀನು ಅರ್ಜಿ ಪುರಸ್ಕರಿಸಬೇಕೆಂದು ವಾದ ಮಂಡಿಸಿದ್ದರು. ಇದಕ್ಕೆ ಎಸ್​​ಪಿಪಿ ಪ್ರಸನ್ನಕುಮಾರ್, ಪ್ರಬಲವಾಗಿ ವಾದ ಮಂಡಿಸಿದ್ದರು.

ಸಮರ್ಥವಾಗಿ ವಾದ ಮಂಡಿಸಿದ್ದ ಎಸ್​​ಪಿಪಿ ಪ್ರಸನ್ನ ಕುಮಾರ್, ಗೌತಮ್ ಎಂಬ ಹೆಸರಿನಲ್ಲಿ ರೇಣುಕಾಸ್ವಾಮಿ ಫೆಬ್ರುವರಿಯಿಂದಲೂ ಪವಿತ್ರಾಗೌಡಗೆ ಆಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ. ಮರ್ಮಾಂಗ ಫೋಟೋ ಕಳುಹಿಸಿದ್ದ. ಕೇವಲ ಒಂದು ಬ್ಲಾಕ್ ಬಟನ್ ಒತ್ತಿ, ಪೊಲೀಸರಿಗೆ ದೂರು ನೀಡಿದ್ದರೆ ಕ್ರಮವಾಗುತಿತ್ತು. ಇದಾವುದು ಮಾಡದೇ ದರ್ಶನ್ ಅಂಡ್ ಗ್ಯಾಂಗ್ ತಿಳಿಸುವ ಮೂಲಕ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿದೆ ಎಂದು ವಾದ ಮಂಡಿಸಿದ್ದರು.

ರೇಣುಕಾಸ್ವಾಮಿ ಎಂಬ ವ್ಯಕ್ತಿ ಇದ್ದಾನೆ ಎಂಬ ಮಾಹಿತಿ ಆರೋಪಿಗಳಿಗಿರಲಿಲ್ಲ ಎಂದು ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ವಾದಕ್ಕೆ ಪ್ರತಿವಾದಿಸಿದ ಎಸ್​​ಪಿಪಿ, ರೇಣುಕಾಸ್ವಾಮಿಗೆ ಆರೋಪಿಗಳು ಪರಿಚಯವಾಗಿರುವ ದಾಖಲಾತಿಗಳಿವೆ. ಜೂ.6ರಂದೇ ಪವಿತ್ರಾ, ಪವನ್, ಧನರಾಜ್ ಸೇರಿ ಇತರರು ಕರೆ ವಿನಿಮಯ ಮಾಡಿರುವುದು, ಆರೋಪಿಗಳೆಲ್ಲರೂ ಅಪಹರಿಸಿ ಹತ್ಯೆಯಾದ ಜಾಗದಲ್ಲಿದ್ದರು ಎಂಬುದಕ್ಕೆ ಟವರ್ ಲೋಕೆಷನ್ ಹಾಗೂ ಟೆಕ್ನಿಕಲ್ ಸಾಕ್ಷಿಗಳಿಂದ ರುಜುವಾಗಿದೆ. ರೇಣುಕಾಸ್ವಾಮಿಯನ್ನ ಅಪಹರಿಸಿ ಕರೆ ತರುವಾಗ ಇಟಿಯೋಸ್ ಕಾರಿನಲ್ಲಿ ಬರುವಾಗ ಆರೋಪಿಗಳಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೂ.8ರಂದು ಮಧ್ಯಾಹ್ನ 1.32ಕ್ಕೆ ಅಪಹರಣಕಾರರು ಪಟ್ಟಣಗೆರೆ ಶೆಡ್ ಬಂದಿದ್ದಾರೆ. ಎ3ಯಿಂದ 9ರ ವರೆಗೆ ರೇಣುಕಾಸ್ವಾಮಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಫೋಟೊವನ್ನ ಆರೋಪಿ ವಿನಯ್ ಕಳುಹಿಸಿದ್ದರು. ಪಟ್ಟಣಗೆರೆಯ ಭದ್ರತಾ ಸಿಬ್ಬಂದಿ ಆರೋಪಿಗಳು ಸ್ಥಳದಲ್ಲಿರುವುದರ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಪ್ರಸನ್ನಕುಮಾರ್ ವಾದಿಸಿದ್ದರು.

ಸಾಕ್ಷಿಗಳ ಹೇಳಿಕೆ ತಡವಾಗಿ ತನಿಖಾಧಿಕಾರಿಗಳು ದಾಖಲಿಸಿದ್ದರೆಂಬ ಸಿ.ವಿ. ನಾಗೇಶ್ ವಾದಕ್ಕೆ ಪ್ರತಿವಾದಿಸಿದ್ದ ಎಸ್​​ಪಿಪಿ, ಶೆಡ್​​ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರ ಹೇಳಿಕೆ ದಾಖಲಿಸಲಾಗಿದೆ. ನಂದೀಶ್, ಧನರಾಜ್ ಅವರು ಜೂ.8ರಂದು ಮಧ್ಯಾಹ್ನ 1 ಗಂಟೆ ವೇಳೆ ಶೆಡ್​​ನಲ್ಲಿದ್ದರು. ಬಳಿಕ ಇನ್ನಿತರ ಆರೋಪಿಗಳು ಬಂದು ಹೋಗಿರುವ ಬಗ್ಗೆ ಪ್ರತ್ಯಕ್ಷ ಸಾಕ್ಷಿಯೊಬ್ಬರು ಸೆಕ್ಷನ್​ 164ರ ಅಡಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಆರೋಪಿಗಳೆಲ್ಲರೂ ಒಂದೇ ಕಡೆಯಿರುವುದು ತಾಂತ್ರಿಕ ಸಾಕ್ಷಿಯಿದೆ ಎಂದು ವಾದಿಸಿದ್ದರು.

ರೇಣುಕಾಸ್ವಾಮಿಯನ್ನ ಮರದ ಪೀಸ್, ಹಗ್ಗದಿಂದ ಹಲ್ಲೆ ಮಾಡಿದ್ದರು. ಕೆಲ ಹೊತ್ತಿನ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಶೆಡ್​ಗೆ ಬಂದರು. ರೇಣುಕಾಸ್ವಾಮಿಯನ್ನ ಒದ್ದರು. ಪವಿತ್ರಾ ಚಪ್ಪಲಿಯಿಂದ ಹೊಡೆದರು. ಎದೆ ಮೇಲೆ ಗಾಯವಾಗಿರುವುದು ವರದಿಯಿದ್ದು, ಇದಕ್ಕೆ ಪೂರಕವಾಗಿದೆ. ಎದೆಗೂಡಿನ ಮುಳೆ ಮುರಿದಿರುವುದು, ದೇಹದಲ್ಲಿ ಎಲ್ಲೆಲ್ಲಿ ರಕ್ತಬಂದಿದೆ ಎಂಬ ವಿವರವಿದೆ. ದೇಹದ 13 ಭಾಗಗಳಿಂದ ರಕ್ತ ಬಂದಿರುವುದು ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಹೇಳಲಾಗಿದೆ. ಮರಣೋತ್ತರ ಪರೀಕ್ಷೆ ವಿಡಿಯೋ ಚಿತ್ರೀಕರಿಸಲಾಗಿದೆ. ಪೋಸ್ಟ್ ಮಾರ್ಟಂ ವಿಳಂಬದಿಂದ ತನಿಖೆಗೆ ತೊಂದರೆಯಾಗಿಲ್ಲ, ಊಟ ಮಾಡಿದ ಎರಡು ಗಂಟೆಯಲ್ಲಿ ಸಾವು ಸಂಭವಿಸಿರುವ ಬಗ್ಗೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಶ್ವಾಸಕೋಶ ಸೇರಿದಂತೆ 39ಕ್ಕೂ ಹೆಚ್ಚು ಗಾಯಗಳಾಗಿದ್ದು, ಇದು ದರ್ಶನ್ ರಕ್ತಚರಿತ್ರೆಯಾಗಿದೆ ಎಸ್​ಪಿಪಿ ಪ್ರಬಲ ವಾದ ಮಂಡಿಸಿದ್ದರು.

ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಜೂನ್‌ 11ರಂದು ದರ್ಶನ್ ಹಾಗೂ ಇತರರನ್ನು ಬಂಧಿಸಲಾಗಿತ್ತು. ಸದ್ಯ ದರ್ಶನ್‌ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಈಗಾಗಲೇ 100ಕ್ಕೂ ಹೆಚ್ಚು ದಿನಗಳನ್ನು ಜೈಲಲ್ಲಿ ಕಳೆದಿದ್ದಾರೆ. ಸೆಪ್ಟೆಂಬರ್‌ 21ರಂದು ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಪ್ರಾಸಿಕ್ಯೂಷನ್‌ ಪರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ಪ್ರಸನ್ನಕುಮಾರ್‌ ವಾದ ಮಂಡಿಸಿದ್ದಾರೆ. ದರ್ಶನ್‌ ಪರ ವಕೀಲ ಸಿ.ವಿ. ನಾಗೇಶ್ ಹಾಗೂ ಪವಿತ್ರಾ ಗೌಡ ಪರವಾಗಿ ವಕೀಲ ಟಾಮಿ ಸೆಬಾಸ್ಟಿಯನ್ ವಾದಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್ ಅವರಿಗೆ ವಿಶೇಷ ಸೌಲಭ್ಯ ನೀಡಿದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಜೊತೆಗೆ ಪವಿತ್ರಾ ಗೌಡ ಮತ್ತು ಕೆಲವರನ್ನು ಪರಪ್ಪನ ಅಗ್ರಹಾರದಲ್ಲಿ ಉಳಿಸಿಕೊಂಡು, ಇನ್ನಿತರ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ:ದರ್ಶನ್​​ ಭೇಟಿಗಾಗಿ ಟೆಡ್ಡಿಬೇರ್​ ಧರಿಸಿ ಬಳ್ಳಾರಿ ಜೈಲಿಗೆ ಬಂದ ಶಿವಮೊಗ್ಗದ ಅಭಿಮಾನಿ

ಇದನ್ನೂ ಓದಿ:ಅಶ್ವಿನಿ ಪುನೀತ್​ ರಾಜ್​ಕುಮಾರ್​ ಕೊಟ್ಟ ಸೈಕಲ್​ನಲ್ಲಿ ವಿಶ್ವ ಪರ್ಯಟನೆ: 45 ದಿನಗಳಲ್ಲಿ ಕನ್ನಡ ಕಲಿತ ಅಪ್ಪು ಅಭಿಮಾನಿ - Appu Fan World tour on bicycle

ABOUT THE AUTHOR

...view details