ಬೆಳಗಾವಿ: ಈ ಬಾರಿ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರ ಸಚಿವರಿಬ್ಬರ ಮಕ್ಕಳ ಸ್ಪರ್ಧೆಯಿಂದ ಗಮನ ಸೆಳೆದಿದೆ. ಮಕ್ಕಳಿಗೆ ಟಿಕೆಟ್ ಘೋಷಣೆಯಾಗಿದ್ದು ಅವರನ್ನು ಗೆಲ್ಲಿಸುವುದೇ ಸಚಿವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪ್ರತಿಸ್ಪರ್ಧಿಗಳಾಗಿ ಬಿಜೆಪಿಯಿಂದ ಹಿರಿಯ ನಾಯಕರು ಅಖಾಡದಲ್ಲಿರುವುದು.
ಎರಡು ತಿಂಗಳ ಹಿಂದೆ ಉಭಯ ಸಚಿವರಿಗೆ ಜವಾಬ್ದಾರಿ: ಸಚಿವ ಸತೀಶ್ ಜಾರಕಿಹೊಳಿ ಪುತ್ರಿಯನ್ನು ಗೆಲ್ಲಿಸುವ ಹೊಣೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಗಲಿಗೆ ಇದ್ದರೆ, ಹೆಬ್ಬಾಳ್ಕರ್ ಪುತ್ರನನ್ನು ಗೆಲ್ಲಿಸುವ ಹೊಣೆ ಸತೀಶ್ ಜಾರಕಿಹೊಳಿ ಮೇಲಿದೆ. ಎರಡು ತಿಂಗಳ ಹಿಂದೆಯೇ ಲೋಕಸಭಾ ಕ್ಷೇತ್ರದ ಉಸ್ತುವಾರಿಗಳನ್ನು ಕಾಂಗ್ರೆಸ್ ಹೈಕಮಾಂಡ್ ನೇಮಿಸಿತ್ತು. ಬೆಳಗಾವಿ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿ ಸತೀಶ್ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನೇಮಿಸಲಾಗಿತ್ತು.
ಹೈಕಮಾಂಡ್ ಆದೇಶದಂತೆ ಚಿಕ್ಕೋಡಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಪ್ರಿಯಾಂಕಾ ಜಾರಕಿಹೊಳಿ ಗೆಲ್ಲಿಸಲು ಲಕ್ಷ್ಮೀ ಹೆಬ್ಬಾಳ್ಕರ್ ಶ್ರಮಿಸಬೇಕಿದೆ. ಇನ್ನು ಬೆಳಗಾವಿ ಕ್ಷೇತ್ರದಲ್ಲಿ ಮೃಣಾಲ್ ಹೆಬ್ಬಾಳ್ಕರ್ ಗೆಲುವಿಗೆ ಸತೀಶ್ ಜಾರಕಿಹೊಳಿ ಕೆಲಸ ಮಾಡಬೇಕಿದೆ. ಆದರೆ, ಮೃಣಾಲ್ ಗೆಲ್ಲಲು ಬಿಜೆಪಿಯಲ್ಲಿ ಇರುವ ಜಾರಕಿಹೊಳಿ ಬ್ರದರ್ಸ್ ಸವಾಲನ್ನು ಎದುರಿಸಬೇಕಿದೆ. ಸಹೋದರರ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಹೆಬ್ಬಾಳ್ಕರ್ ಪುತ್ರನನ್ನು ಗೆಲ್ಲಿಸುವಲ್ಲಿ ಸತೀಶ್ ಯಶಸ್ವಿಯಾಗುತ್ತಾರಾ ಎಂಬ ವಿಚಾರ ಈಗ ತೀವ್ರ ಚರ್ಚೆ ಆಗುತ್ತಿದೆ.
ಮತ್ತೊಂದೆಡೆ ಚಿಕ್ಕೋಡಿಯಲ್ಲಿ ಲಿಂಗಾಯತ ನಾಯಕರನ್ನು ಒಗ್ಗೂಡಿಸುವ ಹೊಣೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್ಗೆ ವಹಿಸಲಾಗಿದೆ. ಪ್ರಕಾಶ್ ಹುಕ್ಕೇರಿ, ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಅವರನ್ನು ವಿಶ್ವಾಸಕ್ಕೆ ಪಡೆದ್ರೆ ಮಾತ್ರ ಕೈ ಅಭ್ಯರ್ಥಿ ಪ್ರಿಯಾಂಕಾ ಗೆಲುವು ಸುಲಭವಾಗಲಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ತಂತ್ರ, ಪ್ರತಿತಂತ್ರ ರೂಪಿಸಬೇಕಿದೆ. ಬೆಳಗಾವಿಯಲ್ಲಿ ಹಿನ್ನಡೆಯಾದ್ರೆ ಚಿಕ್ಕೋಡಿಯಲ್ಲೂ ಕಾಂಗ್ರೆಸ್ಗೆ ಒಳ ಏಟು ಆಗಲಿದೆ. ಅಲ್ಲದೇ ಚಿಕ್ಕೋಡಿಯಲ್ಲಿ ಹಿನ್ನಡೆಯಾದ್ರೆ ಬೆಳಗಾವಿಯಲ್ಲೂ ಒಳ ಏಟು ಬೀಳುವ ಸಾಧ್ಯತೆಯಿದೆ. ಹಾಗಾಗಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಎಚ್ಚರಿಕೆಯ ಹೆಜ್ಜೆ ಇಟ್ಟು ತಮ್ಮ ಮಕ್ಕಳನ್ನು ಗೆಲ್ಲಿಸುವ ಅನಿವಾರ್ಯತೆಯಲ್ಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ನಾನು, ಬೆಳಗಾವಿಗೆ ಸತೀಶ್ ಜಾರಕಿಹೊಳಿ ಉಸ್ತುವಾರಿ ಇದ್ದಾರೆ. ಸಮನ್ವಯತೆಯಿಂದ ಎರಡು ಕಡೆ ಪ್ರಚಾರ ಮಾಡುತ್ತೇವೆ. ಎರಡೂ ಕಡೆ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ ಎಂದಿದ್ದಾರೆ. ಒಟ್ಟಾರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಸತೀಶ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮಕ್ಕಳನ್ನು ಗೆಲ್ಲಿಸುವ ಮೂಲಕ ಕಮಾಲ್ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.