ಬೆಂಗಳೂರು: ಮುಡಾ ಅಕ್ರಮ ನಿವೇಶನ ಹಂಚಿಕೆ ಸಂಬಂಧ ಪಕ್ಷಾತೀತವಾಗಿ ಎಲ್ಲರ ಹೆಸರು ಕೇಳಿ ಬರುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ಹೊಸ ಬಾಂಬ್ ಸಿಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಅಕ್ರಮ ವಿಚಾರವಾಗಿ ತನಿಖೆ ನಡೆಯುತ್ತಿದೆ. ನಾನು ಪ್ರಾಧಿಕಾರದ ಸದಸ್ಯನಾಗಿದ್ದೇನೆ. ತನಿಖೆ ನಡೆಯುತ್ತಿರುವಾಗ ಆರೋಪದ ಬಗ್ಗೆ ನಾನು ಈಗ ಹೇಳಲು ಆಗಲ್ಲ. ನಿರಂತರ 15 ವರ್ಷದಿಂದ ಪ್ರಾಧಿಕಾರದ ಸದಸ್ಯನಾಗಿದ್ದೇನೆ. ಮುಡಾದಲ್ಲಿ ಅಧಿಕಾರಿಗಳು ಅಧಿಕಾರ ಮೀರಿ ಏನಾದರು ಮಾಡಿದ್ದರೆ ಕ್ರಮ ವಹಿಸಲಾಗುತ್ತದೆ ಎಂದರು.
ಪ್ರಾಧಿಕಾರ ಮಾಡಿದ ತೀರ್ಮಾನ ಕಾನೂನು ಬದ್ಧ ಆಗಿಲ್ಲ ಅಂದಾಗ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆಯಬೇಕು. ಮುಡಾ ಸಂಬಂಧ ಹಿಂದಿನ ಸರ್ಕಾರದಿಂದ ಈವರೆಗೆ ಸುಮಾರು 12 ಪತ್ರಗಳನ್ನು ಬರೆದಿದ್ದಾರೆ. ನಾನೂ ಅನೇಕ ಪತ್ರಗಳನ್ನು ಬರೆದಿದ್ದೇನೆ. ಮಂಡಳಿ ಸಭೆ ನಡೆಸದೇ ಇರುವುದು, ಅಭಿವೃದ್ಧಿ ಕೆಲಸ ವಿಳಂಬ ಬಗ್ಗೆ ನಾನು ಪತ್ರಗಳನ್ನು ಬರೆದಿದ್ದೇನೆ. ಮುಡಾ ಸಂಬಂಧ ತನಿಖಾ ಹಂತದಲ್ಲಿರುವಾಗ ನಾನು ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.