ಕರ್ನಾಟಕ

karnataka

ETV Bharat / international

ಬಾಂಗ್ಲಾದೇಶದಲ್ಲಿ ದಂಗೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಸಂಘಟನೆಯಿಂದ ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ - BANGLADESH POLITICS

ಬಾಂಗ್ಲಾದೇಶದ ವಿದ್ಯಾರ್ಥಿ ಸಂಘಟನೆಯು ಹೊಸ ಪಕ್ಷ ರಚನೆಗೆ ಮುಂದಾಗಿದೆ.

ಜತಿಯೊ ನಾಗೋರಿಕ್ ಸಮಿತಿಯ ವಕ್ತಾರೆ ಸಮಂತಾ ಶೆರ್ಮೀನ್
ಜತಿಯೊ ನಾಗೋರಿಕ್ ಸಮಿತಿಯ ವಕ್ತಾರೆ ಸಮಂತಾ ಶೆರ್ಮೀನ್ (ANI)

By ETV Bharat Karnataka Team

Published : Feb 27, 2025, 1:25 PM IST

ಢಾಕಾ, ಬಾಂಗ್ಲಾದೇಶ: ಕಳೆದ ವರ್ಷದ ಆಗಸ್ಟ್​ನಲ್ಲಿ ಬಾಂಗ್ಲಾದೇಶದಲ್ಲಿ ಆಗಿನ ಸರ್ಕಾರದ ವಿರುದ್ಧ ಮಹಾದಂಗೆ ನಡೆಸಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಲು ಕಾರಣವಾಗಿದ್ದ ಬಾಂಗ್ಲಾದೇಶದ ವಿದ್ಯಾರ್ಥಿ ಸಂಘಟನೆಯು ಶುಕ್ರವಾರ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಲಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಸಂಘಟನೆಯ ಪ್ರಮುಖ ನಾಯಕರಲ್ಲಿ ಒಬ್ಬರಾದ ನಹೀದ್ ಇಸ್ಲಾಂ ಅವರು ಮುಹಮ್ಮದ್ ಯೂನುಸ್ ಅವರ ಮಧ್ಯಂತರ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದು, ಇವರು ಹೊಸ ರಾಜಕೀಯ ಪಕ್ಷದ ನೇತೃತ್ವ ವಹಿಸಲಿದ್ದಾರೆ. ರಾಜಧಾನಿ ಢಾಕಾದ ಸಂಸತ್ ಕಟ್ಟಡದ ದಕ್ಷಿಣದಲ್ಲಿರುವ ಮಾಣಿಕ್ ಮಿಯಾ ಅವೆನ್ಯೂದಲ್ಲಿ ಶುಕ್ರವಾರ ನಡೆಯಲಿರುವ ಬೃಹತ್ ಬಹಿರಂಗ ಸಭೆಯಲ್ಲಿ ಹೊಸ ರಾಜಕೀಯ ಪಕ್ಷದ ಘೋಷಣೆಯಾಗಲಿದೆ.

"ಜುಲೈ 2024 ರ ದಂಗೆಯ ನಂತರ ಬಾಂಗ್ಲಾದೇಶದಲ್ಲಿ ಹುಟ್ಟಿದ ಹೊಸ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳು ಹೊಸ ರಾಜಕೀಯ ಪಕ್ಷ ರಚನೆಗೆ ಮುಂದಾಗಿದ್ದಾರೆ" ಎಂದು ವಿದ್ಯಾರ್ಥಿ ಗುಂಪಿನ ವೇದಿಕೆಯಾದ ಜತಿಯೊ ನಾಗೋರಿಕ್ ಸಮಿತಿಯ ವಕ್ತಾರೆ ಸಮಂತಾ ಶೆರ್ಮೀನ್ ಹೇಳಿದರು.

ಎಎನ್ಐ ಜೊತೆ ಮಾತನಾಡಿದ ಶೆರ್ಮೀನ್, ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳ ಸಿದ್ಧಾಂತಗಳು ಬಾಂಗ್ಲಾದೇಶದ ಎಲ್ಲ ಜನರನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ ಅವರು, ಬಾಂಗ್ಲಾದೇಶವನ್ನು ದಕ್ಷಿಣ ಏಷ್ಯಾದಲ್ಲಿ ಆಧುನಿಕ ಮತ್ತು ಪ್ರಮುಖ ದೇಶವಾಗಿ ನಿರ್ಮಿಸಲು ನಾವು ಬಯಸುತ್ತೇವೆ ಎಂದರು.

"ದಂಗೆಯ ಸಮಯದಲ್ಲಿ ರಾಷ್ಟ್ರೀಯ ಏಕೀಕರಣದ ನಂತರ, ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳ ಸಿದ್ಧಾಂತಗಳು ದೇಶದ ಎಲ್ಲಾ ಜನರನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ನಾವು ಅರಿತುಕೊಂಡಿದ್ದೇವೆ. ದೇಶದ ಈಗಿನ ಸಂರಚನೆಯು ಬಾಂಗ್ಲಾದೇಶವನ್ನು ಹೊಸ ಆಧುನಿಕ ದೇಶವನ್ನಾಗಿ ಮಾಡುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿಲ್ಲ. ನಾವು ಬಾಂಗ್ಲಾದೇಶವನ್ನು ದಕ್ಷಿಣ ಏಷ್ಯಾದಲ್ಲಿ ಆಧುನಿಕ ಮತ್ತು ಪ್ರಮುಖ ದೇಶವಾಗಿ ನಿರ್ಮಿಸಲು ಬಯಸುತ್ತೇವೆ. ವಿಶ್ವದಾದ್ಯಂತದ ಜನರನ್ನು ಸಂಪರ್ಕಿಸುತ್ತೇವೆ ಮತ್ತು ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುತ್ತೇವೆ" ಎಂದು ಶೆರ್ಮೀನ್ ಎಎನ್ಐಗೆ ತಿಳಿಸಿದರು.

"ಬಾಂಗ್ಲಾದೇಶವು ಕಳೆದ 53 ವರ್ಷಗಳಿಂದ ಸರ್ಕಾರದ ದಬ್ಬಾಳಿಕೆಯಲ್ಲಿದೆ. ಸರ್ಕಾರಿ ಸಂಸ್ಥೆಗಳು ನಾಶವಾಗಿವೆ. ಸಂಸ್ಥೆಗಳನ್ನು ಪಕ್ಷ ಮತ್ತು ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಲಾಗಿದೆ. ಬಾಂಗ್ಲಾದೇಶದ ಜನರಿಗೂ ಹಕ್ಕುಗಳಿವೆ ಎಂದು ನಾವು ಭಾವಿಸುತ್ತೇವೆ. ಈ ಹಕ್ಕುಗಳ ಆಧಾರದ ಮೇಲೆ, ನಮ್ಮ ಭವಿಷ್ಯದ ರಾಜಕೀಯವನ್ನು ರೂಪಿಸಲಾಗುವುದು. ನಾವು ಹಕ್ಕು ಆಧಾರಿತ ರಾಜಕೀಯದ ಬಗ್ಗೆ, ಸೇವಾ ರಾಜಕೀಯದ ಬಗ್ಗೆ ಮತ್ತು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವಂಥ ರಾಜಕೀಯದ ಬಗ್ಗೆ ಮಾತನಾಡುತ್ತಿದ್ದೇವೆ" ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪಾಕಿಸ್ತಾನ ಅಸ್ಥಿರತೆಯ ವಿಫಲ ದೇಶ; ಸುಳ್ಳು ಪ್ರಚಾರಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು - INDIA SLAMS PAK AT UN

ABOUT THE AUTHOR

...view details