ಕರ್ನಾಟಕ

karnataka

ETV Bharat / bharat

ಜೈಪುರದಲ್ಲಿ ಕಾಂಗ್ರೆಸ್​ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಲಿರುವ ಸೋನಿಯಾ ಗಾಂಧಿ, ಖರ್ಗೆ - Congress Election Manifesto - CONGRESS ELECTION MANIFESTO

ಏಪ್ರಿಲ್ 6 ರಂದು ಜೈಪುರದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ.

Ashok Gehlot
ಅಶೋಕ್ ಗೆಹ್ಲೋಟ್

By ETV Bharat Karnataka Team

Published : Mar 28, 2024, 8:05 PM IST


ಜೈಪುರ, ರಾಜಸ್ಥಾನ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದ ಮೇಲೆ ಕಾಂಗ್ರೆಸ್ ವಿಶೇಷ ಗಮನ ಹರಿಸಿದೆ. ರಾಜ್ಯ ರಾಜಧಾನಿ ಜೈಪುರದಲ್ಲಿ ಲೋಕಸಭೆ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಸೋನಿಯಾ ಗಾಂಧಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಪ್ರಿಲ್ 6 ರಂದು ಜೈಪುರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದು, ಈ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಲೋಕಸಭೆ ಚುನಾವಣೆಯ ಪ್ರಚಾರ ಮತ್ತು ಸಭೆಗಳ ಕಾರ್ಯತಂತ್ರವನ್ನು ನಿರ್ಧರಿಸಲು ಇಂದು ಪಿಸಿಸಿ ವಾರ್ ರೂಂನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.

ಸಭೆಯ ನಂತರ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುಖಜೀಂದರ್ ಸಿಂಗ್ ರಾಂಧವಾ, ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರಾ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ಮಾಹಿತಿ ಬಹಿರಂಗ ಪಡಿಸಿದರು. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, " ಸೋನಿಯಾ ಗಾಂಧಿ ರಾಜಸ್ಥಾನದಿಂದ ರಾಜ್ಯಸಭಾ ಸಂಸದರಾದವರು. ಇದೀಗ ಸೋನಿಯಾ ಗಾಂಧಿ ಅವರು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಲೋಕಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ." ಎಂದು ಹೇಳಿದರು.

"ಪ್ರಧಾನಿ ಮೋದಿ ಪ್ರತಿಯೊಂದು ಕ್ಷೇತ್ರದಲ್ಲೂ ಅತಿಯಾಗಿಯೇ ಮಾಡಿದ್ದಾರೆ. ಜನರು ಅವರ ಬಗ್ಗೆ ಅತೃಪ್ತರಾಗಿದ್ದಾರೆ. ಕೋಪವೂ ಇದೆ. ಆದರೆ ಆದಾಯ ತೆರಿಗೆ ಇಲಾಖೆ, ಇಡಿ ಭಯದಿಂದ ಯಾರೂ ಮಾತನಾಡುತ್ತಿಲ್ಲ. ಇಂದಿರಾ ಗಾಂಧಿಯವರ ಕಾಲದಲ್ಲಿ ಅಂಡರ್ ಕರೆಂಟ್​ನಿಂದಾಗಿ ನಮ್ಮ ಸರ್ಕಾರ ಸೋತಿತ್ತು. ಉತ್ತರ ಭಾರತದ ಎಲ್ಲ ಕ್ಷೇತ್ರಗಳಲ್ಲೂ ಪಕ್ಷ ಸೋತಿತ್ತು. ನಾಥೂರಾಂ ಮಿರ್ಧಾ ನಾಗೌರ್‌ನಿಂದ ಏಕೈಕ ಸ್ಥಾನವನ್ನು ಗೆದ್ದಿದ್ದರು. ಸ್ವತಃ ಇಂದಿರಾಗಾಂಧಿಯೂ ಸೋತರು. ಆದರೆ ಮತ್ತೊಮ್ಮೆ ಇಂದಿರಾಗಾಂಧಿ ಸಂಸದೆಯೂ ಆದರು. ಈ ಬಾರಿಯೂ ಅದೇ ರೀತಿಯ ಅಂಡರ್‌ಕರೆಂಟ್ ತನ್ನ ಪರಿಣಾಮವನ್ನು ತೋರಿಸಬಹುದು" ಎಂದು ಹೇಳಿದರು.

ಬಿಜೆಪಿ ಮತ್ತು ಕೇಂದ್ರ ಸರ್ಕಾರ ರಾಂಧವಾ ಚಾಟಿ: ರಾಜ್ಯ ಉಸ್ತುವಾರಿ ಸುಖಜೀಂದರ್ ಸಿಂಗ್ ರಾಂಧವಾ ಮಾತನಾಡಿ, ಬಿಜೆಪಿ ಮತ್ತು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದರು. "ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಸೀಟ್​ಗಳನ್ನು ಪಡೆಯುವ ಬಗ್ಗೆ ಮಾತನಾಡುತ್ತಿದೆ. ಆದರೆ, ಅವರಿಗೆ ಒಳಗೊಳಗೇ ಭಯವಾಗುತ್ತಿದೆ. ಬುಧವಾರ ಚುರುವಿನಿಂದ ಬಿಕಾನೇರ್‌ಗೆ ಹೋಗುತ್ತಿದ್ದಾಗ ನಮ್ಮ ಹೆಲಿಕಾಪ್ಟರ್‌ ಟೇಕಾಫ್ ಮಾಡಲು ಅನುಮತಿ ನೀಡಲಿಲ್ಲ. ನಂತರ, ಅಶೋಕ್ ಗೆಹ್ಲೋಟ್ ಮತ್ತು ಗೋವಿಂದ್ ದೋಟಸಾರಾ ರಸ್ತೆಯ ಮೂಲಕ ಬಿಕಾನೇರ್‌ಗೆ ಹೋಗಬೇಕಾಯಿತು. ಇಂತಹ ತಂತ್ರಗಳನ್ನು ಅನುಸರಿಸುವ ಮೂಲಕ ಅವರು ಕಾಂಗ್ರೆಸ್ ಅನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಚುನಾವಣಾ ಬಾಂಡ್‌ಗಳು ಸಹ ಬಿಜೆಪಿಯವರ ಅಪ್ರಾಮಾಣಿಕತೆ ಸಾರಿ ಹೇಳಿದೆ" ಎಂದರು.

ರಾಜಸಮಂದ್‌ನಿಂದ ಅಭ್ಯರ್ಥಿ ಬದಲಾವಣೆ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಕ್ಷದ ರಾಜ್ಯಾಧ್ಯಕ್ಷ ಗೋವಿಂದ್‌ ಸಿಂಗ್‌ ದೋಟಸಾರ, "ಪಕ್ಷವು ಸುದರ್ಶನ್‌ ಸಿಂಗ್‌ ರಾವತ್‌ ಅವರಿಗೆ ರಾಜ್‌ಸಮಂದ್‌ನಿಂದ ಪ್ರಬಲ ಅಭ್ಯರ್ಥಿ ಎಂದು ಟಿಕೆಟ್ ನೀಡಿದೆ, ಆದರೆ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ, ಹಿಂದೆ ಸರಿಯುತ್ತಿರುವುದಾಗಿ ಪತ್ರ ಕಳುಹಿಸಿದ್ದಾರೆ. ಸತತ ಎರಡು ತಿಂಗಳಿನಿಂದ ವ್ಯಾಪಾರಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ಬ್ಯುಸಿಯಾಗಿರುವುದಾಗಿ ಅವರು ಪತ್ರದಲ್ಲಿ ಕಾರಣವನ್ನು ನೀಡಿದ್ದಾರೆ. ಈ ಸಂಪೂರ್ಣ ವಿಷಯವನ್ನು ಹೈಕಮಾಂಡ್‌ಗೆ ತಿಳಿಸಲಾಗುವುದು. ಈ ವಿಚಾರದಲ್ಲಿ ಹೈಕಮಾಂಡ್ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ." ಎಂದು ತಿಳಿಸಿದರು.

ಇದನ್ನೂ ಓದಿ:ಶಿವಸೇನೆ ಏಕನಾಥ್ ಶಿಂಧೆ ಬಣ ಸೇರ್ಪಡೆ ಆದ ಬಾಲಿವುಡ್​ ಖ್ಯಾತ ನಟ ಗೋವಿಂದ - Actor Govinda join Shiv Sena

ABOUT THE AUTHOR

...view details