ನವದೆಹಲಿ: ಜಿಎಸ್ಟಿ (ಸರಕು ಮತ್ತು ಸೇವೆಗಳ ಕಾಯ್ದೆ) ಮತ್ತು ಕಸ್ಟಮ್ಸ್ ಕಾಯ್ದೆಗಳಿಗೂ ನಿರೀಕ್ಷಣಾ ಜಾಮೀನು ಕಾನೂನು ಅನ್ವಯವಾಗುತ್ತದೆ ಹಾಗೂ ಎಫ್ಐಆರ್ ಆಗಿರದಿದ್ದರೂ ವ್ಯಕ್ತಿಗಳು ನಿರೀಕ್ಷಣಾ ಜಾಮೀನು (ಬಂಧನ ಪೂರ್ವ ಜಾಮೀನು) ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.
ಕಸ್ಟಮ್ಸ್ ಕಾಯ್ದೆ, ಜಿಎಸ್ಟಿ ಕಾಯ್ದೆಯಲ್ಲಿನ ದಂಡದ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲಿನ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠವು ಕಾಯ್ದಿರಿಸಿತ್ತು.
ನಿರೀಕ್ಷಣಾ ಜಾಮೀನಿನ ವಿಚಾರದಲ್ಲಿ ಸಿಆರ್ಪಿಸಿ ಮತ್ತು ನಂತರ ಜಾರಿಯಾಗಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ನಿಬಂಧನೆಗಳು ಕಸ್ಟಮ್ಸ್ ಮತ್ತು ಜಿಎಸ್ಟಿ ಕಾಯ್ದೆಗಳ ಅಡಿ ವ್ಯಕ್ತಿಗಳಿಗೆ ಅನ್ವಯವಾಗುತ್ತವೆ ಎಂದು ತೀರ್ಪು ಪ್ರಕಟಿಸಿದ ಸಿಜೆಐ ಹೇಳಿದರು.
ಜಿಎಸ್ಟಿ ಮತ್ತು ಕಸ್ಟಮ್ಸ್ ಕಾಯ್ದೆಗಳ ಅಡಿ ಸಂಭಾವ್ಯ ಬಂಧನವನ್ನು ಎದುರಿಸುತ್ತಿರುವ ವ್ಯಕ್ತಿಗಳು ಎಫ್ಐಆರ್ ದಾಖಲಿಸುವ ಮೊದಲೇ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಕೋರ್ಟ್ ಹೇಳಿತು. ಈ ಕುರಿತು ರಾಧಿಕಾ ಅಗರ್ವಾಲ್ ಎಂಬುವವರು 2018ರಲ್ಲಿ ಅರ್ಜಿ ಸಲ್ಲಿಸಿದ್ದರು. ತೀರ್ಪಿನ ಮತ್ತಷ್ಟು ವಿವರಗಳಿಗಾಗಿ ಕಾಯಲಾಗುತ್ತಿದೆ.
ಇದನ್ನೂ ಓದಿ : ಮಹಾ ಕುಂಭಮೇಳದ ಕೊನೆಯ ದಿನ 1 ಕೋಟಿಗೂ ಹೆಚ್ಚು ಜನರಿಂದ ಪುಣ್ಯಸ್ನಾನ; ಮಹಾಶಿವರಾತ್ರಿಯಂದು ಭಕ್ತಿಭಾವದ 'ಸಂಗಮ' - MAHA KUMBH MELA