ಬಳ್ಳಾರಿ: ನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆಗೆ ಸಂಡೂರಿನ ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳು ಹಸಿರು ಸಿರಿಯಿಂದ ಶೃಂಗಾರಗೊಂಡಿವೆ. ಅಕ್ರಮ ಗಣಿಗಾರಿಕೆಯಿಂದ ನಲುಗಿದ್ದ ಪ್ರದೇಶದಲ್ಲಿ ಪ್ರಕೃತಿ ಸೌಂದರ್ಯ ಮೈದಳೆದಿದೆ. ಇಲ್ಲಿನ ದೋಣಿಮಲೈ, ರಾಮಗಢ, ಸ್ವಾಮಿಮಲೈ, ಈಶಾನ್ಯ ವಲಯದ ಅರಣ್ಯ ಪ್ರದೇೆಶಗಳಲ್ಲಿ ಹೆಚ್ಚು ನವಿಲುಗಳಿವೆ. ಅದರಲ್ಲಿಯೂ ಸ್ವಾಮಿಮಲೈ ಬೆಟ್ಟದಲ್ಲಿ ನವಿಲುಗಳ ಸಂಖ್ಯೆ ಇನ್ನೂ ಹೇರಳ. ಇತ್ತೀಚೆಗೆ ನವಿಲೊಂದು ಗರಿಬಿಚ್ಚಿ ಸಂಭ್ರಮಿಸಿರುವ ದೃಶ್ಯವನ್ನು ಪರಿಸರಪ್ರಿಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಚಾರಣಪ್ರಿಯರು, ಪ್ರಯಾಣಿಕರು, ಪ್ರವಾಸಿಗರು ನವಿಲುಗಳನ್ನು ನೋಡಿ ಆನಂದಿಸುತ್ತಿದ್ದಾರೆ.