ಬೆಲೆ ಏರಿಕೆ ಬಗ್ಗೆ ಸದನದಲ್ಲಿ ವಿತ್ತ ಸಚಿವೆ ಮಾತು; ಕಾಂಗ್ರೆಸ್ ಸಂಸದರಿಂದ ಸಭಾತ್ಯಾಗ
ಬೆಲೆ ಏರಿಕೆ ವಿಚಾರವಾಗಿ ಸದನದ ಹೊರಗೆ, ಒಳಗೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಸಂಸದರು, ಇಂದು ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಲು ಶುರು ಮಾಡ್ತಿದ್ದಂತೆ ಸಭಾತ್ಯಾಗ ಮಾಡಿದರು. ಮುಂಗಾರು ಅಧಿವೇಶನ ಆರಂಭಗೊಂಡಾಗಿನಿಂದಲೂ ಕಾಂಗ್ರೆಸ್ ಪಕ್ಷ ಬೆಲೆ ಏರಿಕೆ, ಜಿಎಸ್ಟಿ ಹಾಗೂ ಹಣದುಬ್ಬರ ವಿಚಾರವಾಗಿ ಪ್ರತಿಭಟನೆ ಮಾಡಲು ಶುರು ಮಾಡಿದೆ. ಇದೇ ವಿಚಾರವಾಗಿ ನಿರ್ಮಲಾ ಸೀತಾರಾಮನ್ ಚರ್ಚೆ ಆರಂಭಿಸಿದ್ದರು. ಈ ವೇಳೆ ಕಾಂಗ್ರೆಸ್ ಸಂಸದರು ಸಭಾತ್ಯಾಗ ಮಾಡಿದ್ದಾರೆ. "ಬೆಲೆ ಏರಿಕೆ ಬಗ್ಗೆ ಕೇಂದ್ರ ಮಾತನಾಡಲು ಮುಂದಾಗುತ್ತಿಲ್ಲ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡ್ತಿದೆ. ಆದರೆ, ಇದೀಗ ಚರ್ಚೆ ಮಾಡಲು ನಾವು ಮುಂದಾಗುತ್ತಿದ್ದಂತೆ ಸಭೆಯಿಂದ ಹೊರ ನಡೆದಿದೆ" ಎಂದು ಕಾಂಗ್ರೆಸ್ ನಡೆಗೆ ನಿರ್ಮಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.