ಪಠ್ಯಕ್ರಮದಲ್ಲಿ ಟಿಪ್ಪು ಚರಿತ್ರೆ ತೆಗೆದಿರುವುದಕ್ಕೆ ವಿಜಯಪುರದಲ್ಲಿ ಪ್ರತಿಭಟನೆ - ವಿಜಯಪುರ ಸುದ್ದಿ
ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಚರಿತ್ರೆ ತೆಗೆದಿರುವುದನ್ನು ವಿರೋಧಿಸಿ ಟಿಪ್ಪು ಸುಲ್ತಾನ್ ಗ್ರೂಪ್ ಆಫ್ ಅಸೋಸಿಯೇಶನ್ ಸಂಘಟನೆ ಕಾರ್ಯಕರ್ತರು ವಿಜಯಪುರದಲ್ಲಿ ಪ್ರತಿಭಟಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ರಾಜ್ಯ ಸರ್ಕಾರ 7ನೇ ತರಗತಿಯ ಪಠ್ಯದಲ್ಲಿ ಟಿಪ್ಪು ಚರಿತ್ರೆ ತೆಗೆದು ಹಾಕಿದೆ. ಟಿಪ್ಪು ತನ್ನ ಮಗನ ಪ್ರಾಣ ಒತ್ತೆಯಿಟ್ಟು ದೇಶ ರಕ್ಷಣೆ ಮಾಡಿದ್ದಾನೆ. ಆದರೆ, ಅಂತಹ ಶೂರ ವ್ಯಕ್ತಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು. ಸರ್ಕಾರ ತಕ್ಷಣವೇ ಟಿಪ್ಪು ಚರಿತ್ರೆಯನ್ನು ಮತ್ತೆ ಪಠ್ಯಪುಸ್ತಕದಲ್ಲಿ ಸೇರಿಸಲು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.