ಡಿ ಕೆ ಶಿವಕುಮಾರ್ಗೆ ಶ್ರೀಮೈಲಾರಲಿಂಗೇಶ್ವರನ ಶಾಪವೇ?! - Mylara lingeshwara curse to DK Shivakumar,
ಮಾಜಿ ಸಚಿವ ಡಿಕೆ ಶಿವಕುಮಾರ್ಗೆ ಬಳ್ಳಾರಿಯ ಹಡಗಲಿ ತಾಲೂಕಿನ ಶ್ರೀಮೈಲಾರಲಿಂಗೇಶ್ವರನ ಶಾಪವಂತೆ. ಆ ಶಾಪ ವಿಮೋಚನೆಗಾಗಿ ಇಂದು ಮೈಲಾರದಲ್ಲಿ ಹಡಗಲಿಯ ಹಾಲಿ ಶಾಸಕರಾದ ಪಿ ಟಿ ಪರಮೇಶ್ವರ ನಾಯಕ್ ಅವರ ಸಮಕ್ಷಮದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ವಿಭಾಗದ ಅಧ್ಯಕ್ಷ ಬಿ ವಿ ಶಿವಯೋಗಿ ಅವರು ಕೂಡ ಹಾಲಿ ಶಾಸಕ ಪಿಟಿಪಿಯೊಂದಿಗೆ ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಹೆಲಿಕಾಪ್ಟರ್ ಮೂಲಕ ಮೈಲಾರ ಕಾರ್ಣಿಕೋತ್ಸವಕ್ಕೆ ಡಿಕೆಶಿ ಆಗಮಿಸಿದ್ದರು. ಹೆಲಿಕಾಪ್ಟರ್ ಮೂಲಕ ಮೈಲಾರಕ್ಕೆ ಬಂದಿದ್ದೇ ಡಿಕೆಶಿ ಈಗ ಸಂಕಷ್ಟ ಸಿಲುಕುವಂತೆ ಮಾಡಿದೆಯಂತೆ. ಜಾರಿ ನಿರ್ದೇಶನಾಲಯದ ಬಲೆಗೆ ಸಿಲುಕಿ ಜೈಲಿಗೆ ಹೋಗುವಂತಾಗಿದೆಯಂತೆ. ಹಾಗಾಗಿ ಡಿಕೆಶಿ ಬೆಂಬಲಿಗರು ಶ್ರೀಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿಕೆಶಿ ಅವರಿಗೆ ಎದುರಾಗಿರುವ ಸಂಕಷ್ಟಗಳ ನಿವಾರಣೆಯಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.