ಕುಮಟಾದಲ್ಲಿ ಬಾವಿಗೆ ಬಿದ್ದ 2 ಗೂಳಿಗಳು.. ಜೀವದ ಹಂಗು ತೊರೆದು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ! - bulls protection news
ಕಾರವಾರ : ಸುಮಾರು 20 ಅಡಿ ಆಳದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಗೂಳಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕುಮಟಾ ತಾಲೂಕಿನ ಹೆಗಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನಮ್ಮ ಕಾಲೋನಿಯಲ್ಲಿ ನಡೆದಿದೆ. ನಿನ್ನೆ ಸಂಜೆ ಹೊತ್ತಿಗೆ ಎರಡು ಗೂಳಿಗಳು ಬಾವಿಗೆ ಬಿದ್ದಿದ್ದು, ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅದರಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸತತ ಒಂದೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಗೂಳಿಗಳು ನೀರು ತುಂಬಿದ ಕಿರಿದಾದ ಬಾವಿಯಲ್ಲಿ ಬಿದ್ದ ಕಾರಣ ಹಗ್ಗ ಹಾಕುವುದೇ ದೊಡ್ಡ ಸವಾಲಾಗಿತ್ತು. ಅಗ್ನಿ ಶಾಮಕ ಸಿಬ್ಬಂದಿ ಚಂದ್ರು ಮೊಗೇರ ಎಂಬುವರು ಜೀವದ ಹಂಗು ತೊರೆದು ಗೂಳಿಗಳಿಗೆ ಹಗ್ಗ ಕಟ್ಟಿದ್ದಾರೆ. ಬಳಿಕ ಯಾವುದೇ ಹಾನಿ ಆಗದಂತೆ ಸಿಬ್ಬಂದಿ ಗೂಳಿಗಳನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಯಿತು.