ಮೋಟಾರ್ ರಿಪೇರಿ ಮಾಡುವ ವೇಳೆ ಜಾರಿ ಬಿದ್ದು ಇಬ್ಬರು ಕಾರ್ಮಿಕರ ಸಾವು!
ವಿಜಯಪುರ:ಕಾಲುವೆಯಲ್ಲಿ ಮೋಟಾರ್ ರಿಪೇರಿ ಮಾಡುವ ವೇಳೆ ಇಬ್ಬರು ಕಾರ್ಮಿಕರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಮೃತ ಕಾರ್ಮಿಕರನ್ನು ಭೋಜರಾಜ್ ದಶವಂತ ಹಾಗೂ ರಾಜಕುಮಾರ ದಶವಂತ ಎಂದು ಗುರುತಿಸಲಾಗಿದೆ. ಕಾಲುವೆ ಮೇಲೆ ನಿಂತು ಮೋಟಾರ್ ರಿಪೇರಿ ಮಾಡುತ್ತಿದ್ದಾಗ ಭೋಜರಾಜ್ ಕಾಲು ಜಾರಿ ಬಿದ್ದು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದ. ಅದನ್ನು ನೋಡಿದ ರಾಜಕುಮಾರ ಕಾಪಾಡಲು ಹೋಗಿ ಆತನೂ ಸಹ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಈ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ನುರಿತ ಈಜು ತಜ್ಞರು ಕಾಲುವೆಯಿಂದ ಇಬ್ಬರನ್ನು ಹುಡುಕಿ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕುಡಿದ ನಶೆಯಲ್ಲಿ ಗಲಾಟೆ: ಸ್ನೇಹಿತರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ
ಇದನ್ನೂ ಓದಿ :ಮಂಗಳೂರಿನ ಸಮುದ್ರ ತೀರದಲ್ಲಿ 2 ಟನ್ ತೂಕದ ಡಾಲ್ಫಿನ್ ಕಳೇಬರ ಪತ್ತೆ