Published : Nov 13, 2023, 2:48 PM IST
|Updated : Nov 13, 2023, 3:07 PM IST
ಹೈಕಮಾಂಡ್ ಬಹಳ ಯೋಚನೆ ಮಾಡಿ ವಿಜಯೇಂದ್ರರ ನೇಮಕ ಮಾಡಿದೆ: ರಮೇಶ ಜಿಗಜಿಣಗಿ
ವಿಜಯಪುರ:ಬಿ.ವೈ.ವಿಜಯೇಂದ್ರ ಆಯ್ಕೆ ಹೈಕಮಾಂಡ್ ಮಟ್ಟದ ನಿರ್ಧಾರ ಎಂದು ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ ಹೇಳಿದರು. ರಾಜ್ಯಾಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಸೋಮವಾರ ಸುದ್ದಿಗಾರರು ಕೇಳಿದ ಕೆಲವು ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಪಕ್ಷದ ಹಿರಿಯರು ಯಾವುದೋ ಕಾರಣಕ್ಕೆ ಬಹಳ ಯೋಚನೆ ಮಾಡಿ ವಿಜಯೇಂದ್ರ ಅವರ ನೇಮಕವನ್ನು ಮಾಡಿದ್ದಾರೆ. ವಿಜಯೇಂದ್ರರ ನೇಮಕ ನಾವಂತೂ ಮಾಡಿಲ್ಲ. ಯಡಿಯೂರಪ್ಪ ಮಗನನ್ನೇ ರಾಜ್ಯ ಬಿಜೆಪಿ ಅಧ್ಯಕ್ಷ ಮಾಡಬೇಕೆಂದು ಹೈಕಮಾಂಡ್ ನಿರ್ಣಯ ಮಾಡಿದೆ. ಆ ಪ್ರಕಾರ ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಆಗಿದ್ದಾರೆ. ಅವರು ರಾಜ್ಯಾಧ್ಯಕ್ಷ ಆಗಿದ್ದರಿಂದ ನಮಗೇನೂ ಹೊಟ್ಟೆ ಉರಿ ಇಲ್ಲ. ಆ ಹುದ್ದೆಯ ಆಕಾಂಕ್ಷಿಯೂ ಆಗಿರಲಿಲ್ಲ. ಅದರ ಕನಸೂ ಕಂಡವನಲ್ಲ. ನಮ್ಮ ರಾಜಕೀಯ ಭವಿಷ್ಯ ನಮಗೆ ಗೊತ್ತಿದೆ. ಕಳೆದ 75 ವರ್ಷಗಳಿಂದ ದಲಿತ ನಾಯಕರು ಮತ್ತೊಬ್ಬರ ಪರವಾಗಿ ಕೈ ಎತ್ತುತ್ತಲೇ ಬಂದವರು. ಆದರೆ, ಅವರ ಪರವಾಗಿ ಯಾರೂ ಕೈ ಎತ್ತುತ್ತಿಲ್ಲ ಅನ್ನೋದು ದುಃಖದ ಸಂಗತಿ ಎಂದು ಪರೋಕ್ಷವಾಗಿ ದಲಿತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಅಥವಾ ಪ್ರಮುಖ ಹುದ್ದೆ ಸಿಗಬೇಕಿತ್ತೆಂದು ತಮ್ಮ ಮಾತಿನ ಮೂಲಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇವೆ: ಮುರುಗೇಶ್ ನಿರಾಣಿ