ಹಳ್ಳಿಮೇಷ್ಟ್ರಿಗೆ ಅದ್ಧೂರಿ ಬೀಳ್ಕೊಡುಗೆ; ಊರ ಜನರಿಂದ ರಾಜಮರ್ಯಾದೆ- ವಿಡಿಯೋ ನೋಡಿ - chikkamagaluru Retired teacher
ಚಿಕ್ಕಮಗಳೂರು:ಘನತೆ ಅನ್ನೋ ಪದಕ್ಕೆ ನಿಜ ಅರ್ಥ ನೀಡೋದು ಶಿಕ್ಷಕ ವೃತ್ತಿ. ಅದರಲ್ಲೂ 'ಹಳ್ಳಿಮೇಷ್ಟ್ರು'ಗಳಿಗೆ ಇರುವ ಗೌರವವೇ ಬೇರೆ. ಶಿಕ್ಷಕ ನಿವೃತ್ತಿಯಾದ್ರೆ ಮಕ್ಕಳು ಗೊಳೋ ಎಂದು ಕಣ್ಣೀರಿಟ್ಟ ಪ್ರಸಂಗಗಳು ಸಾಕಷ್ಟಿವೆ. ಇಲ್ಲೊಬ್ಬ ನಿವೃತ್ತರಾದ ಶಿಕ್ಷಕರಿಗೆ ರಾಜಮರ್ಯಾದೆ ನೀಡಲಾಗಿದೆ. ಊರಿನ ತುಂಬೆಲ್ಲ ಅವರನ್ನು ಮೆರವಣಿಗೆ ಮಾಡಿಸಿ ಬೀಳ್ಕೊಡಲಾಗಿದೆ.
ಜಿಲ್ಲೆಯ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ಈ ವಿಶೇಷತೆ ಘಟಿಸಿದೆ. 29 ವರ್ಷಗಳ ವೃತ್ತಿ ಜೀವನದಲ್ಲಿ 23 ವರ್ಷ ಹಳಿಯೂರು ಗ್ರಾಮದ ಪ್ರೈಮರಿ ಸ್ಕೂಲ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿಕ್ಷಕ ಎನ್.ವಿ. ಲಕ್ಷ್ಮಣ್ ಅವರನ್ನು ವಿದ್ಯಾರ್ಥಿಗಳು ಮಾತ್ರವಲ್ಲ, ಊರಿನ ಜನರೆಲ್ಲ ಸೇರಿ ಅದ್ಧೂರಿ ಮೆರವಣಿಗೆ ಮಾಡಿದರು.
ಎನ್.ವಿ.ಎಲ್. ಎಂದೇ ಖ್ಯಾತರಾಗಿರುವ ಶಿಕ್ಷಕರು, ಇದೇ ಜೂನ್ 30ರಂದು ಸೇವೆಯಿಂದ ನಿವೃತ್ತಿಯಾದರು. ಹಾಗಾಗಿ, ಊರಿನ ಜನ ಅವರಿಗೆ ಸುರಿಯೋ ಮಳೆಯ ನಡುವೆಯೂ ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿದ್ದಾರೆ. ಹಾದಿಯುದ್ದಕ್ಕೂ ಡ್ರಮ್, ವಿವಿಧ ವಾದ್ಯಗಳನ್ನು ಮೊಳಗಿಸಿದ್ದಾರೆ.
ವಿದ್ಯಾರ್ಥಿನಿಯರು ವೀರಗಾಸೆಯ ಮುಖಾಂತರ ಶಿಕ್ಷಕರನ್ನು ಶಾಲೆಗೆ ಕರೆದೊಯ್ದರು. ಶಾಲೆಯ ಆವರಣಕ್ಕೆ ಬಂದಾಗ ಪುಷ್ಟವೃಷ್ಟಿ ಮಾಡಿದರು. ಹೂಗಳ ಮೇಲೆ ಅವರನ್ನು ನಡೆಸಿದರು. ಬಳಿಕ ಊರಿನ ಜನ ಹಾಗೂ ಶಾಲಾ ಮಕ್ಕಳು ಸೇರಿ ಶಿಕ್ಷಕ ದಂಪತಿಗೆ ಸನ್ಮಾನ ಮಾಡಿ, ಊರಿನ ಹಬ್ಬದ ವಾತಾವರಣದಂತೆ ಬೀಳ್ಕೊಟ್ಟರು. ಇದಲ್ಲವೇ ಶಿಕ್ಷಕ ವೃತ್ತಿಗಿರುವ ಗತ್ತು?.
ಇದನ್ನೂ ಓದಿ:ಬೆಲೆ ಕುಸಿತ ಕಂಡಿರುವ ತೆಂಗು, ಕೊಬ್ಬರಿಗೆ 3 ಸಾವಿರ ರೂ. ಕನಿಷ್ಠ ಬೆಂಬಲ ಬೆಲೆ ಘೋಷಿಸಿ: ಮಾಜಿ ಸಿಎಂ ಹೆಚ್ಡಿಕೆ