ಕರ್ನಾಟಕ

karnataka

ಪ್ರಾರ್ಥನಾ ಸ್ಥಳದ ವಿಚಾರವಾಗಿ ಪೊಲೀಸರ ಮೇಲೆ ಕಲ್ಲು ತೂರಾಟ: ಓರ್ವ ವ್ಯಕ್ತಿ ಸಾವು

By

Published : Jun 17, 2023, 12:05 PM IST

ಪೊಲೀಸ್​ ವಾಹನಕ್ಕೆ ಬೆಂಕಿ

ಜುನಾಗಢ್​ (ಗುಜರಾತ್​): ಪ್ರಾರ್ಥನಾ ಸ್ಥಳದ ತೆರವು  ವಿಚಾರವಾಗಿ ನಿನ್ನೆ ರಾತ್ರಿ ಜುನಾಗಢದ ಮೆಜೆವಾಡಿಯಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಘಟನೆಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಅಕ್ರಮ ಒತ್ತುವರಿ ತೆರುವ ಕಾರ್ಯ ಕೈಗೊಂಡಿರುವ ನಗರಸಭೆ, ಪ್ರಾರ್ಥನಾ ಸ್ಥಳವನ್ನು ತೆರವುಗೊಳಿಸುವ ಬಗ್ಗೆ ಜೂನ್​ 14 ರಂದು ನೋಟಿಸ್​ ಜಾರಿ ಮಾಡಿತ್ತು. ಅದರಂತೆ ನಿನ್ನೆ ರಾತ್ರಿ ತೆರವು ಕಾರ್ಯಾಚರಣೆಗೆ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸರು ತೆರಳಿದ್ದ ವೇಳೆ ಆ ಜಾಗದಲ್ಲಿ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದರು.  

ಈ ವೇಳೆ ಅವರೆಲ್ಲ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ. ಈ ವೇಳೆ ಪೊಲೀಸರು ತೆರವು ಕಾರ್ಯಾಚರಣೆಗೆ ಅನುಮತಿ ನೀಡುವಂತೆ ನೆರೆದಿದ್ದ ಜನರಲ್ಲಿ ಮನವಿ ಮಾಡಿಕೊಂಡಿದ್ದರು.  ಇದಕ್ಕೆ ಒಪ್ಪದ ಜನ ಪೊಲೀಸರೊಂದಿಗೆ ಮಾತಿನ ಚಕಮಕಿಗಿಳಿದಿದ್ದಾರೆ. ಅಲ್ಲದೇ ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ, ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿದ್ದಾರೆ.  

ಈ ವೇಳೆ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದು, ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 174 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ವಿಡಿಯೋ ಸೆರೆಯಾಗಿದ್ದು ಅದರಲ್ಲಿ ಸುಮಾರು 200 ರಿಂದ 300 ಜನರು ತೆರವು ಕಾರ್ಯಚರಣೆಗೆ ಅಡ್ಡಿ ಪಡಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದಾರೆ. ಬಳಿಕ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿರುವುದು ಸೆರೆಯಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸ್​ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 

ಇದನ್ನೂ ಓದಿ:ಉತ್ತರಾಖಂಡದಲ್ಲಿ ವ್ಯಕ್ತಿ ಹತ್ಯೆ.. ಪೊಲೀಸರ ಮೇಲೆ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ

ABOUT THE AUTHOR

...view details