ಕರ್ನಾಟಕ

karnataka

ತುಮಕೂರು ನಗರ ವಿಧಾನಸಭಾ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಯಾಗಿ ಸೊಗಡು ಶಿವಣ್ಣ ಉಮೇದುವಾರಿಕೆ ಸಲ್ಲಿಕೆ

By

Published : Apr 20, 2023, 6:32 PM IST

ಮಾಜಿ ಸಚಿವ ಸೊಗಡು ಶಿವಣ್ಣ

ತುಮಕೂರು :ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಇಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆಸಲ್ಲಿಸಿದ ನಂತರ ರೋಡ್ ಶೋ ನಡೆಸಿದ ಸೊಗಡು ಶಿವಣ್ಣನಿಗೆ, ಬೆಂಬಲಿಗರು ಸ್ವಾಭಿಮಾನಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಕುಟುಂಬ ರಾಜಕಾರಣಕ್ಕೆ ವಿರೋಧ ವ್ಯಕ್ತಪಡಿಸಿದರು.   

ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಈ ಹಿಂದೆ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಸೊಗಡು ಶಿವಣ್ಣ, ಎರಡು ಅವಧಿಯ ನಂತರ ಪುನಃ ಟಿಕೆಟ್​ಗಾಗಿ ಸಾಕಷ್ಟು ಈ ಬಾರಿ ದುಂಬಾಲು ಬಿದ್ದಿದ್ದರು. ಅಲ್ಲದೇ ತಮ್ಮ ಹಿರಿತನವನ್ನು ಪರಿಗಣಿಸಿ ಟಿಕೆಟ್ ದೊರೆಯಲಿದೆ ಎಂಬ ನಂಬಿಕೆ ಸಹ ಇಟ್ಟಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಹಾಲಿ ಶಾಸಕ ಜ್ಯೋತಿ ಗಣೇಶ ಅವರಿಗೆ ಪುನಃ ಬಿಜೆಪಿ ಟಿಕೆಟ್ ಘೋಷಣೆ ಮಾಡಿತ್ತು. ಈ ಮೂಲಕ ಒಂದು ರೀತಿ ಶಿವಣ್ಣ ಬಂಡಾಯವಾಗಿ ಸ್ಪರ್ಧಿಸಲು ಪರೋಕ್ಷವಾಗಿ ವೇದಿಕೆ ಮಾಡಿಕೊಟ್ಟಂತಾಗಿತ್ತು.    

ಈ ವಿಚಾರವಾಗಿ ತೀವ್ರ ಆಕ್ರೋಶಗೊಂಡ ಸೊಗಡು ಶಿವಣ್ಣ,  ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರನ್ನು ಕೂಡ ಸಂಪರ್ಕಿಸಿ ಚರ್ಚೆ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಕಳೆದ ಎರಡು ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕೊಂಡಿರುವ ಗೋವಿಂದರಾಜು ಅವರಿಗೆ ಪಕ್ಷವು ಜೆಡಿಎಸ್ ಟಿಕೆಟ್ ನೀಡಿದೆ. ಇದರಿಂದಾಗಿ ಸೊಗಡು ಶಿವಣ್ಣ ಅನಿವಾರ್ಯ ಎಂಬಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.   

ಇದನ್ನೂ ಓದಿ :ಕನಕಪುರದಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ: ಅಚ್ಚರಿಗೆ ಕಾರಣವಾದ ಕಾಂಗ್ರೆಸ್‌ ನಡೆ

ABOUT THE AUTHOR

...view details