ಕರ್ನಾಟಕ

karnataka

ಬೆಲ್ಲ ತಯಾರಿಕಾ ಘಟಕದ ಶೆಡ್‌ಗೆ ಬೆಂಕಿ

By

Published : May 15, 2023, 10:11 AM IST

ETV Bharat / videos

ಬೆಲ್ಲ ತಯಾರಿಕಾ ಘಟಕದ ಶೆಡ್‌ಗೆ ಬೆಂಕಿ: ನಾಲ್ವರು ವಲಸೆ ಕಾರ್ಮಿಕರಿಗೆ ಗಾಯ

ನಾಮಕ್ಕಲ್(ತಮಿಳು ನಾಡು): ನಾಮಕ್ಕಲ್ ಜಿಲ್ಲೆಯ ಬೆಲ್ಲ ತಯಾರಿಕಾ ಘಟಕದಲ್ಲಿನ ತಾತ್ಕಾಲಿಕ ಶೆಡ್‌ಗೆ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಒಡಿಶಾ ಹಾಗೂ ಛತ್ತೀಸ್‌ಗಢ ಮೂಲದ ನಾಲ್ವರು ವಲಸೆ ಕಾರ್ಮಿಕರು ಗಾಯಗೊಂಡಿದ್ದಾರೆ. ಶೇ.80 ರಷ್ಟು ಸುಟ್ಟ ಗಾಯಗಳೊಂದಿಗೆ ನೆರೆಯ ಕರೂರು ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿರುವ ಒಡಿಶಾದ ಟಿ.ರಾಕೇಶ್ (19) ಎಂಬಾತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಭಾನುವಾರ ಮುಂಜಾನೆ ಜೇಡರಪಾಳ್ಯಂನ ಸರಳೈಮೇಡುವಿನ ಮುತ್ತುಸಾಮಿ ಎಂಬುವವರಿಗೆ ಸೇರಿದ ಬೆಲ್ಲ ಘಟಕದ ಶೆಡ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಆಗ ಕಾರ್ಮಿಕರು ಮಲಗಿದ್ದರು. ಉಳಿದ ಕಾರ್ಮಿಕರು ಬೆಂಕಿ ನಂದಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕಾರಕ್ಕೆ ಕೃತ್ಯ?:ಜಿಲ್ಲೆಯಲ್ಲಿ ಎರಡು ಹಿಂದೆ ವಲಸೆ ಕಾರ್ಮಿಕರು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿರುವ ಬೆನ್ನಲೇ ಈ ಘಟನೆ ನಡೆದಿದೆ. ಪೊಲೀಸ್ ಮಹಾನಿರ್ದೇಶಕ ಸಿ. ಸೈಲೇಂದ್ರ ಬಾಬು ಅವರು ಈ ಪ್ರಕರಣ(ಕೊಲೆ)ದ ತನಿಖೆಯನ್ನು ಅಪರಾಧ ವಿಭಾಗ-ಸಿಐಡಿಗೆ ವರ್ಗಾಯಿಸಿದ್ದಾರೆ.

ಘಟನೆಯ ವಿವರ: ಮಾ.12 ರಂದು ಕರಪ್ಪಾಲಯದಲ್ಲಿ ಮೇಕೆ ಮೇಯಿಸಲು ಹೋದಾಗ 27 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಇಲ್ಲಿನ ಬೆಲ್ಲ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷದ ಸ್ಥಳೀಯ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಘಟನೆಯಲ್ಲಿ ವಲಸೆ ಕಾರ್ಮಿಕರು ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. 

ಬೆಲ್ಲ ತಯಾರಿಕಾ ಘಟಕಗಳಿಗೆ ವಲಸೆ ಕಾರ್ಮಿಕರನ್ನು ನೇಮಿಸದೆ ಸ್ಥಳೀಯರನ್ನು ನೇಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರೂ, ಮಾಲೀಕರು ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳುವುದನ್ನು ಮುಂದುವರೆಸಿದ್ದಾರೆ. ಇದರಿಂದ ಕೆರಳಿದ ಕೆಲವು ಗ್ರಾಮಸ್ಥರು ವಲಸೆ ಕಾರ್ಮಿಕರನ್ನು ನೇಮಿಸಿಕೊಂಡಿದ್ದ ಕೆಲವು ಬೆಲ್ಲದ ಘಟಕಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  

ಸ್ಥಳದಲ್ಲಿ ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿಧಿವಿಜ್ಞಾನ ತಜ್ಞರು ತನಿಖೆಗಾಗಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಜಿಲ್ಲಾಧಿಕಾರಿ ಶ್ರೇಯಾ ಪಿ.ಸಿಂಗ್, ಪೊಲೀಸ್ ಮಹಾ ನಿರೀಕ್ಷಕ (ಪಶ್ಚಿಮ ವಲಯ) ಆರ್.ಸುಧಾಕರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕಲೈಚೆಲ್ವನ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬೆಲ್ಲದ ಶೆಡ್​​ಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವುದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇದಕ್ಕೆ ಕಾರಣರಾದವರನ್ನು ಬಂಧಿಸಲು 8 ವಿಶೇಷ ಪಡೆಗಳನ್ನು ರಚಿಸಲಾಗಿದೆ. 24 ಗಂಟೆಯೊಳಗೆ ಬಂಧಿಸುವಂತೆ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ:ತಮಿಳುನಾಡಿನಲ್ಲಿ ನಕಲಿ ಮದ್ಯ ಸೇವಿಸಿ 10 ಮಂದಿ ಸಾವು: ಹಲವರು ಆಸ್ಪತ್ರೆಗೆ ದಾಖಲು  

ABOUT THE AUTHOR

...view details