ಗಾಯಕನ ಕಂಠಸಿರಿ ಮೆಚ್ಚಿ ಮೈಮೇಲೆ ರಾಶಿ ರಾಶಿ ಹಣ ಸುರಿದ ಜನರು: ವಿಡಿಯೋ - ಗಾಯಕನ ಮೇಲೆ ಹಣ ತೂರಿದ ಜನರು
ವಲ್ಸಾದ್ (ಗುಜರಾತ್):ಹಾಡು, ಸಂಗೀತ ಯಾರಿಗೆ ತಾನೆ ಇಷ್ಟವಿಲ್ಲ?. ಇಂಪಾದ ಹಾಡೊಂದು ಕಿವಿಗೆ ಬಿದ್ದರೆ ಮೈ-ಮನ ತನ್ನಿಂದ ತಾನೇ ನಲಿಯುತ್ತದೆ. ಅದು ಕೆಲವೊಮ್ಮೆ ಮೇರೆ ಮೀರಿ ಇನ್ನೂ ಏನೇನೋ ಮಾಡಿಸುವುದೂ ಉಂಟು. ಗುಜರಾತ್ನ ವಲ್ಸಾದ್ನಲ್ಲಿ ಜನಪ್ರಿಯ ಜಾನಪದ ಗಾಯಕ ಕೀರ್ತಿದನ್ ಗಧ್ವಿ ಅವರ ಮೇಲೆ ಪ್ರೇಕ್ಷಕರು ಹಣದ ಮಳೆಯನ್ನೇ ಸುರಿಸಿದರು.
ಮಾರ್ಚ್ 11ರಂದು ವಲ್ಸಾದ್ನಲ್ಲಿ ಆಯೋಜಿಸಲಾದ ಭಜನಾ ಕಾರ್ಯಕ್ರಮದಲ್ಲಿ ಜನರು ಗಧ್ವಿಯ ಹಾಡಿಗೆ ತಲೆದೂಗಿ, ಅವರ ಮೇಲೆ ಹಣವನ್ನು ಚೆಲ್ಲಾಡಿದ್ದಾರೆ. 10, 20, 50, 100 ರೂಪಾಯಿ ಮೊತ್ತದ ನೋಟುಗಳನ್ನು ಗಾಳಿಯಲ್ಲಿ ತೂರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿದೆ.
ಈ ಹಿಂದೆಯೂ ಕೂಡ ನವಸಾರಿ ಗ್ರಾಮದಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಸುಮಾರು 40 ರಿಂದ 50 ಲಕ್ಷ ರೂಪಾಯಿಗಳಷ್ಟು ನೋಟುಗಳನ್ನು ಗಧ್ವಿ ಅವರ ಮೇಲೆ ಸುರಿಮಳೆ ಮಾಡಲಾಗಿತ್ತು. 10, 20, 50 ಮತ್ತು 100 ರೂಪಾಯಿಗಳ ನೋಟುಗಳನ್ನು ಹಲವು ದಿನ ನಡೆದ ಕಾರ್ಯಕ್ರಮದಲ್ಲಿ ಪ್ರತಿದಿನವೂ ಸುರಿದಿದ್ದರು. ಕಾರ್ಯಕ್ರಮ ಮುಕ್ತಾಯದ ವೇಳೆಗೆ ಅದು 40- 50 ಲಕ್ಷ ರೂಪಾಯಿ ಆಗಿತ್ತು ಎಂದು ಗಾಯಕ ಕೀರ್ತಿದನ್ ಗಧ್ವಿ ಅವರೇ ಹೇಳಿಕೊಂಡಿದ್ದರು.
ಕೀರ್ತಿದನ್ ಗಧ್ವಿ ಅವರು ಜಾನಪದ ಕಲಾವಿದ. ಗುಜರಾತ್ನಲ್ಲಿ ಅವರು ಹೆಚ್ಚು ಪ್ರಖ್ಯಾತರಾಗಿದ್ದಾರೆ. ಅವರ ಕಾರ್ಯಕ್ರಮಗಳಿಗೆ ಜನರು ಸಾಗರೋಪದಿಯಲ್ಲಿ ಧಾವಿಸುತ್ತಾರೆ. ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನರು ಈ ರೀತಿ ಹಣವನ್ನು ಗಾಯಕರ ಮೇಲೆ ತೂರಾಡುವುದು ಇಲ್ಲಿ ಸಹಜ ಎಂಬಂತಾಗಿದೆ.
ಇದನ್ನೂ ಓದಿ:ಜಮ್ಮು ಕಾಶ್ಮೀರ ದೇಶದ ಅವಿಭಾಜ್ಯ ಅಂಗ, ರಾಜ್ಯ ಸ್ಥಾನಮಾನ ಮರಳಿ ನೀಡಿ: ಫಾರೂಕ್ ಅಬ್ದುಲ್ಲಾ