ಮೇಲ್ಸೇತುವೆಯಿಂದ ಬಿದ್ದ ಸರ್ಕಾರಿ ಬಸ್, 20 ಜನರಿಗೆ ಗಾಯ.. ವಿಡಿಯೋ
Published : Sep 15, 2023, 8:11 AM IST
ಗಾಜಿಯಾಬಾದ್, ಉತ್ತರಪ್ರದೇಶ:ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್ವೊಂದು ಮೇಲ್ಸೇತುವೆ ಮೇಲಿಂದ ಬಿದ್ದಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಸಂಭವಿಸಿದೆ. ದೆಹಲಿ ಮೀರತ್ ಎಕ್ಸ್ಪ್ರೆಸ್ವೇನಲ್ಲಿ ನಡೆದ ಈ ಘಟನೆಯಲ್ಲಿ 20 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಿದು ಘಟನೆ.. ದೆಹಲಿ-ಮೀರತ್ ಎಕ್ಸ್ಪ್ರೆಸ್ವೇ ಸರ್ಕಾರಿ ಬಸ್ ಹೋಗುತ್ತಿತ್ತು. ಈ ವೇಳೆ ಹವಾ ಹವಾಯಿ ರೆಸ್ಟೋರೆಂಟ್ ಬಳಿ ಬಸ್ ನಿಯಂತ್ರಣ ತಪ್ಪಿದೆ. ಬಳಿಕ ಬಸ್ ನೇರವಾಗಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ ಹೊಡೆದು ಫ್ಲೈಓವರ್ ಮೇಲಿಂದ ಕೆಳಗೆ ಬಿದ್ದಿದೆ. ಈ ಅಪಘಾತದಲ್ಲಿ 20 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಎಸಿಪಿ ನರೇಶ್ ಕುಮಾರ್ ತಿಳಿಸಿದ್ದಾರೆ. ಗದ್ದೆಗೆ ಬೀಳುವ ಮುನ್ನ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದಿದೆ ಎಂದು ಗಾಯಾಳು ಮಹಮ್ಮದ್ ಸಾಧಿಕ್ ತಿಳಿಸಿದ್ದಾರೆ. ಬಸ್ ಚಾಲಕ ನಿದ್ರೆಯಲ್ಲಿ ಇದ್ದಿರುವುದೇ ಘಟನೆಗೆ ಕಾರಣ ಎಂದು ಕೆಲ ಪ್ರಯಾಣಿಕರು ಆರೋಪಿಸಿದ್ದಾರೆ. ಆದರೆ ಈ ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಓದಿ:ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ತಿರುಪತಿಗೆ ತೆರಳಿದ್ದ ಬೆಳಗಾವಿಯ ಐವರು ಸಾವು