ಅದ್ಭುತ ಜ್ಞಾಪಕ ಶಕ್ತಿ: ಬಡತನದಲ್ಲಿ ಅರಳುತ್ತಿರುವ ಪ್ರತಿಭೆಗೆ ಬೇಕಿದೆ ನೆರವು - ETV Bharat Kannada News
ಕುಷ್ಟಗಿ (ಕೊಪ್ಪಳ) :ತಾಲೂಕಿನ ಕೇಸೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿ ಓದುತ್ತಿರುವ ಪರಶುರಾಮ ಭಜಂತ್ರಿ ಬಡತನ ಬೇಗೆಯಲ್ಲಿ ಅರಳುತ್ತಿರುವ ಅದ್ಭುತ ಬಾಲ ಪ್ರತಿಭೆ. ಈತ ಪ್ರಭಾಕರ ಹಾಗೂ ಲಕ್ಷ್ಮೀ ಭಜಂತ್ರಿ ದಂಪತಿಯ ಮಗ. ತಂದೆ ಪ್ರಭಾಕರ ಎಸ್ಸೆಸ್ಸೆಲ್ಸಿ ಓದಿದ್ದು, ತಾಯಿ ಲಕ್ಷ್ಮೀ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಇವರದ್ದು ಬಡ ಕುಟುಂಬ. ಸಂಕಷ್ಟದ ಜೀವನಕ್ಕೆ ಕರಗದೆ ಮಗ ಪರಶುರಾಮ್ನನ್ನು ಅಂಗನವಾಡಿಯ ಬಳಿಕ ಇದೀಗ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಗೆ ಸೇರಿಸಿದ್ದಾರೆ.
ಬಾಲಕನ ಜ್ಞಾಪಕ ಶಕ್ತಿ ವಿಸ್ಮಯವೆನಿಸುವಂತಿದೆ. ಯಾವುದೇ ವಿಷಯವನ್ನು ಒಮ್ಮೆ ಹೇಳಿಕೊಟ್ಟರೆ ಸಾಕು, ಯಾವಾಗ ಕೇಳಿದರೂ ಥಟ್ಟನೆ ಉತ್ತರಿಸುವ ಚಾಕಚಕ್ಯತೆ ಈತನಲ್ಲಿದೆ. ದೇಶದ ವಿವಿಧ ರಾಜ್ಯಗಳ ರಾಜಧಾನಿ, ಅಲ್ಲಿನ ಪ್ರಧಾನಿ/ಅಧ್ಯಕ್ಷರು, ದೇಶಗಳ ರಾಷ್ಟ್ರೀಯ ಪ್ರಾಣಿ-ಪಕ್ಷಿ ಇತ್ಯಾದಿ ವಿವರಗಳನ್ನು ಈತ ಹೇಳಬಲ್ಲ.
ಭಾರತರತ್ನ, ಜ್ಞಾನಪೀಠ ಪ್ರಶಸ್ತಿ ವಿಜೇತರು, ವಚನಗಳು, ಸಂಶೋಧಕರ ಹೆಸರುಗಳನ್ನು ಹರಳು ಹುರಿದಂತೆ ಹೇಳುತ್ತಾನೆ. ರಾಜರ ಆಳ್ವಿಕೆಗಳೂ ಸೇರಿದಂತೆ 1,900 ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಈತನದ್ದು. ತಾಯಿ ಲಕ್ಷ್ಮೀ ಹುಣಸೆ ವ್ಯಾಪಾರ ಬಳಿಕ ಬಿಡುವಿನ ಸಮಯದಲ್ಲಿ ಐಎಎಸ್, ಕೆಎಎಸ್ ಪ್ರಶ್ನೋತ್ತರಗಳನ್ನು ಬರೆದಿಟ್ಟುಕೊಂಡು ಹೇಳಿಕೊಡುವುದಲ್ಲದೇ ಪುನರ್ ಮನನದಿಂದ ಇಷ್ಟೆಲ್ಲಾ ಜ್ಞಾನ ಸಂಪತ್ತನ್ನು ಬಾಲಕ ಹೆಚ್ಚಿಸಿಕೊಂಡಿದ್ದಾನೆ. ಆದರೆ ಬದುಕು ಮುಂದೆ ಸಾಗಲು ಕಡು ಬಡತನ ಅಡ್ಡಿಯಾಗುತ್ತಿದೆ. ಬಾಲ ಪ್ರತಿಭೆಗೆ ಸಹೃದಯರ ಪ್ರೋತ್ಸಾಹದ ಅಗತ್ಯತೆ ಇದೆ.
ಇದನ್ನೂ ಓದಿ:ಖಾಸಗಿ ಶಾಲೆಯ ವಿದ್ಯಾರ್ಥಿಗಳಿಂದ 100 ನಿಮಿಷಗಳಲ್ಲಿ 1 ರಿಂದ 100 ರವರೆಗೆ ಮಗ್ಗಿ ಪಠಿಸಿ ವಿಶ್ವ ದಾಖಲೆ