ನಾಳೆ ಚಿತ್ತೂರಿನ ಕುಪ್ಪನಿಂದ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ರ ಪಾದಯಾತ್ರೆ ಪ್ರಾರಂಭ
ವಿಜಯವಾಡ( ಆಂಧ್ರಪ್ರದೇಶ) :ಟಿಡಿಪಿಅಧ್ಯಕ್ಷ ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ನಾರಾ ಲೋಕೇಶ್ ಅವರು ನಾಳೆ(ಜ.27)ಯಿಂದ ಚಿತ್ತೂರು ಜಿಲ್ಲೆಯ ಕುಪ್ಪಂನಿಂದ 'ಯುವಗಳಂ' ಪಾದಯಾತ್ರೆ ಪ್ರಾರಂಭಿಸಲಿದ್ದಾರೆ. ನಾಳೆ ಬೆಳಗ್ಗೆ 11.30ಕ್ಕೆ ಕುಪ್ಪಂನ ಲಕ್ಷ್ಮೀಪುರಂ ವರದರಾಜ ಸ್ವಾಮಿ ದೇವಸ್ಥಾನದಿಂದ ಯುವಗಳಂ ಪಾದಯಾತ್ರೆ ಶುರುವಾಗಲಿದೆ. ಸುಮಾರು 4000 ಕಿ.ಮಿ ಪಾದಾಯತ್ರೆಯಲ್ಲಿ 125ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲೂ ಲೋಕೇಶ್ ಸಂಚರಿಸಲಿದ್ದಾರೆ.
ಪಾದಯಾತ್ರೆ ಜೊತೆ ಸಾರ್ವಜನಿಕ ಸಭೆಗಳಲ್ಲೂ ಲೋಕೇಶ್ ಭಾಗವಹಿಸಿ ಮಾತನಾಡಲಿದ್ದಾರೆ. ಮುಂದಿನ ಬಾರಿ ಟಿಡಿಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ. ಇನ್ನು ಪಾದಯಾತ್ರೆ ಆರಂಭದ ಬಳಿಕ ಸಂಜೆ ಬಹಿರಂಗ ಸಭೇ ನಡೆಯಲಿದ್ದು, ಇದರಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಸುಮಾರು 50 ಸಾವಿರ ಜನ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಸಭೆಯಲ್ಲಿ ಭಾಗವಹಿಸುವ 50 ಸಾವಿರ ಜನಕ್ಕಾಗಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.
ಮೊದಲ ದಿನ: ಕುಪ್ಪಂ ಕ್ಷೇತ್ರದ ಲಕ್ಷ್ಮೀಪುರಂನ ವರದರಾಜಸ್ವಾಮಿ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಲಿರುವ ನಾರಾ ಲೋಕೇಶ್ ಅಲ್ಲಿಂದ ಹಳೆಪೇಟೆಗೆ ತೆರಳಲಿದ್ದಾರೆ. ಅಲ್ಲಿಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮುಸ್ಲಿಂ ಮುಖಂಡರನ್ನು ಭೇಟಿಯಾಗಲಿದ್ದಾರೆ.
ಇದನ್ನೂ ಓದಿ:ಪಾಂಡಿಚೇರಿ ವಿವಿಯಲ್ಲಿ ವಿವಾದಿತ ಸಾಕ್ಷ್ಯಚಿತ್ರ ಪ್ರದರ್ಶನ.. ವಿದ್ಯಾರ್ಥಿಗಳ ನಡುವೆ ವಾಗ್ವಾದ