ನಮ್ಮ ಯಾಜಮಾನರು ಮಾಡಿರುವ ಕೆಲಸವೇ ನನಗೆ ಶ್ರೀರಕ್ಷೆ: ಮಂಜುಳಾ ಅರವಿಂದ ಲಿಂಬಾವಳಿ - Manjula Aravinda Limbavali reaction on congress
ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿಗೆ ಏನು ಗೊತ್ತು? ಒಂದು ತಿಂಗಳ ಹಿಂದೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಕಳೆದ ಒಂದು ದಶಕದಿಂದ ಇಲ್ಲಿ ನಮ್ಮ ಯಾಜಮಾನರು ಮಾಡಿರುವ ಕೆಲಸವೇ ನನಗೆ ಶ್ರೀರಕ್ಷೆ ಎಂದು ಬಿಜೆಪಿ ಮಹಿಳಾ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಹೇಳಿದರು. ಬುಧವಾರ ಬೆಳಗ್ಗೆಯಿಂದಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅವರು, ವರ್ತೂರು, ಬಳಗೆರೆ, ಸೊರೆಹುಣಸಿ, ಪಣತ್ತೂರು ಹಾಗೂ ಕೊಡತಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ಮತಯಾಚಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದು ಭವಿಷ್ಯದ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿಕೊಂಡರು. 2008ರಿಂದ ಇದುವರೆಗೂ ಮೂರು ಬಾರಿ ಅರವಿಂದ ಲಿಂಬಾವಳಿ ಜನರಿಂದ ಆಯ್ಕೆಯಾಗಿದ್ದಾರೆ. ರಸ್ತೆ, ಚರಂಡಿ ಹಾಗೂ ಕೆರೆ ಅಭಿವೃದ್ಧಿ ಸೇರಿದಂತೆ ಹಲವು ರೀತಿಯ ಪ್ರಗತಿ ಕಾರ್ಯಗಳನ್ನು ಮಾಡಿದ್ದಾರೆ. ಕಾರ್ಯಕರ್ತರ ಅಣಿತಿಯಂತೆ ಕೆಲಸ ಮಾಡಿದ್ದಾರೆ. ಅವರ ಕೆಲಸವೇ ನನಗೆ ಶ್ರೀರಕ್ಷೆಯಾಗಿದೆ ಎಂದರು.
ಕಳೆದ ಮೂರು ಅವಧಿಗಳಲ್ಲಿಯೂ ತಲಾ ಒಬ್ಬೊಬ್ಬರಂತೆ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದೀಗ ಅವರೆಲ್ಲರೂ ಕಳೆದುಹೋಗಿದ್ದಾರೆ. ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಕಳೆದ ಒಂದು ತಿಂಗಳಿಂದ ಕಾಂಗ್ರೆಸ್ ಅಭ್ಯರ್ಥಿ ಹೇಳುತ್ತಿದ್ದಾರೆ. ಇಷ್ಟು ವರ್ಷ ಎಲ್ಲಿ ಹೋಗಿದ್ದರು. ಸುಖಾಸುಮ್ಮನೆ ಆರೋಪ ಸರಿಯಲ್ಲ. ಕ್ಷೇತ್ರ ಪರಿವೀಕ್ಷಣೆ ನಡೆಸಿದಾಗ ಕೆಲಸ ಮಾಡಿರುವುದು ಗೊತ್ತಾಗುತ್ತದೆ. ಈ ಬಾರಿ ಕ್ಷೇತ್ರದಿಂದ ಗಂಟುಮೂಟೆ ಕಟ್ಟುವಂತೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಭದ್ರಕೋಟೆಗೆ ಕೇಸರಿ ಲಗ್ಗೆ: ಇದೇ ಮೊದಲ ಬಾರಿ ಮುಸ್ಲಿಂ ಕಾಲೊನಿಗಳಲ್ಲಿ ಮತಯಾಚನೆ