ಕರ್ನಾಟಕ

karnataka

ಅಂಜನಾದ್ರಿಯಲ್ಲಿ ಭಕ್ತರ ದಂಡು

By ETV Bharat Karnataka Team

Published : Jan 15, 2024, 8:57 PM IST

ETV Bharat / videos

ಮಕರ ಸಂಕ್ರಾಂತಿ: ಅಂಜನಾದ್ರಿಯಲ್ಲಿ ಭಕ್ತರ ದಂಡು

ಗಂಗಾವತಿ (ಕೊಪ್ಪಳ): ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಸೋಮವಾರ ತಾಲೂಕಿನ ದೇವಸ್ಥಾನಗಳಲ್ಲಿ ಜನದಟ್ಟಣೆ ಅಧಿಕವಾಗಿತ್ತು. ಸಮೀಪದ ನದಿ, ಹಳ್ಳ-ಕೊಳ್ಳಗಳಲ್ಲಿ ಮಿಂದೆದ್ದ ಭಕ್ತರು ಸಮೀಪದ ದೇವಸ್ಥಾನಗಳಿಗೆ ತೆರಳಿ ದೈವ ದರ್ಶನ ಮಾಡಿಕೊಂಡರು.

ಮುಖ್ಯವಾಗಿ ತಾಲೂಕಿನ ಚಿಕ್ಕರಾಂಪೂರದ ಬಳಿ ಇರುವ ಪ್ರಮುಖ ಧಾರ್ಮಿಕ ತಾಣ ಅಂಜನಾದ್ರಿ ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಅಧಿಕವಾಗಿತ್ತು. ಮಹಿಳೆಯರು, ಮಕ್ಕಳು ದೊಡ್ಡ ಪ್ರಮಾಣದಲ್ಲಿ ಅಂಜನಾದ್ರಿಗೆ ಭೇಟಿ ನೀಡಿದ್ದರು. ಸರಿಸುಮಾರು ಸೋಮವಾರ ಒಂದೇ ದಿನ ಐವತ್ತು ಸಾವಿರಕ್ಕೂ ಅಧಿಕ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ. 

ಮಕರ ಸಂಕ್ರಾಂತಿ ಹಬ್ಬದಲ್ಲಿ, ಅದರಲ್ಲೂ ಮುಖ್ಯವಾಗಿ ಸೂರ್ಯ ತನ್ನ ಪಥ ಬದಲಿಸುವ ಸಂದರ್ಭದಲ್ಲಿ ನದಿಗಳಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿ ಹಿಂದೂಗಳಲ್ಲಿದೆ. ಹೀಗಾಗಿ ತಾಲೂಕಿನ ಚಿಕ್ಕಜಂತಕಲ್, ಆನೆಗೊಂದಿಯ ನವವೃಂದಾವನ ಗಡ್ಡೆಗೆ ತೆರಳುವ ಮಾರ್ಗ, ಚಿಂತಾಮಣಿ, ಸಣಾಪುರ, ಬಸವನದುರ್ಗ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಮಿಂದೆದ್ದ ಜನ ಸಮೀಪದ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಪಂಪಾಸರೋವರದ ಮಹಾಲಕ್ಷ್ಮಿ ದೇಗುಲ, ಆನೆಗೊಂದಿಯ ಚಿಂತಾಮಣಿ, ಮೇಗೋಟೆಯ ದುರ್ಗಾಶಕ್ತಿ ದೇಗುಲ, ಋಷಿಮುಖ ಪರ್ವತ ಸೇರಿದಂತೆ ಇನ್ನಿತರ ಧಾರ್ಮಿಕ, ಪ್ರವಾಸಿ ತಾಣಗಳಲ್ಲಿ ಜನರ ದಟ್ಟಣೆ ಅಧಿಕವಾಗಿ ಕಂಡು ಬಂತು. 

ವಾಹನಗಳ ದಟ್ಟಣೆ :ಮಕರ ಸಂಕ್ರಾಂತಿ ಅಂಗವಾಗಿ ತಾಲೂಕಿನ ಚಿಕ್ಕರಾಂಪೂರದಲ್ಲಿರುವ ಅಂಜನಾದ್ರಿ ದೇಗುಲಕ್ಕೆ ಕೊಪ್ಪಳ ಜಿಲ್ಲೆ ಮಾತ್ರವಲ್ಲ, ನೆರೆ - ಹೊರೆ ಜಿಲ್ಲೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ವಾಹನಗಳ ದಟ್ಟಣೆ ಅಧಿಕವಾಗಿತ್ತು.

ಗಂಗಾವತಿ - ಆನೆಗೊಂದಿ - ಹುಲುಗಿ - ಮುನಿರಾಬಾದ್ ಮಾರ್ಗದಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿತ್ತು. ವಿಪರೀತವಾದ ಟ್ರಾಫಿಕ್ ಕಿರಿಕಿರಿಯಾಗಿತ್ತು. ಮುಖ್ಯವಾಗಿ ಆನೆಗೊಂದಿ ಸಂಣಾಪುರದ ಮಧ್ಯೆ ಕೇವಲ ಐದು ಕಿಲೋಮೀಟರ್ ಅಂತರದ ಪ್ರಯಾಣಕ್ಕೆ ಅರ್ಧಗಂಟೆಗೂ ಅಧಿಕ ಸಮಯ ಹಿಡಿಯಿತು.

ಗ್ರಾಮೀಣ ಪೊಲೀಸರು, ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಹರಸಾಹಸ ಮಾಡಿದರು. ಬೆಳಗ್ಗೆ ಎಂಟು ಗಂಟೆಯಿಂದ ನಿಧಾನವಾಗಿ ಆರಂಭವಾದ ವಾಹನಗಳ ದಟ್ಟಣೆ ಸಂಜೆ ಆರು ಗಂಟೆವರೆಗೂ ಇತ್ತು. ಹೀಗಾಗಿ ಜನ ಹಾಗೂ ವಾಹನ ಸವಾರರು ಹೈರಾಣಾಗಿದ್ದರು.

ಇದನ್ನೂ ಓದಿ:ಸಂಕ್ರಾಂತಿ ನಿಮಿತ್ತ ಹೂವು ಹಣ್ಣುಗಳಿಂದ ಶೃಂಗಾರಗೊಂಡ ಪಂಡರಾಪುರ ದೇವಾಲಯ

ABOUT THE AUTHOR

...view details