ಕುಕ್ಕೆ ಸುಬ್ರಹ್ಮಣ್ಯ: ಸಾಕು ನಾಯಿ ಹೊತ್ತೊಯ್ದ ಚಿರತೆ - ETV Bharat kannada News
ಕುಕ್ಕೆ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ಸಾಕು ನಾಯಿಯನ್ನು ಚಿರತೆ ದಾಳಿ ನಡೆಸಿ ಹೊತ್ತೊಯ್ದ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ಕಳೆದ ತಡರಾತ್ರಿ ನಡೆದಿದೆ. ವೆಂಕಟಪುರ ಲೀಲಾವತಿ ದೇವರಾಜ್ ಅವರ ಮನೆಯ ಸಾಕು ನಾಯಿ ಕಾಣೆಯಾಗಿದೆ. ಎರಡು ಸಾಕು ನಾಯಿಗಳು ಮನೆಯ ಗೇಟ್ ಬಳಿ ಇದ್ದಾಗ ಚಿರತೆ ದಾಳಿ ನಡೆಸಿ ಒಂದು ನಾಯಿಯನ್ನು ಎಳೆದುಕೊಂಡು ಹೋಗಿದೆ.
ಕೂಗಾಟ ಕೇಳಿ ಮನೆಯ ಕೆಲಸದಾಳು ಎಚ್ಚರಗೊಂಡಿದ್ದು, ಅವರ ಎದುರಲ್ಲೇ ನಾಯಿಯನ್ನು ಕಚ್ಚಿಕೊಂಡು ಹೋಗಿದೆ. ಮನೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮತ್ತು ಸ್ಥಳೀಯ ಪೊಲೀಸರು ಸೂಚನೆ ನೀಡಿದ್ದಾರೆ. ಈ ಘಟನೆ ನಡೆದ ಬಳಿಕ ಸ್ಥಳಿಯ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ. ಚಿರತೆ ಸೆರೆಹಿಡಿಯುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ:ಸೆರೆ ಸಿಕ್ಕ ಚಿರತೆಗಳಿಗೆ ಮೈಕ್ರೋ ಚಿಪ್ ಅಳವಡಿಕೆ : ಇದರ ಉಪಯೋಗ ಏನು?