ಕೊಪ್ಪಳದಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ : ಬಸ್ನಲ್ಲಿ ಕನ್ನಡ ಗೀತೆ ಹಾಡಿ ಪ್ರಯಾಣಿಕರನ್ನು ರಂಜಿಸಿದ ನಿರ್ವಾಹಕ - Bus conductor sing a song in bus
Published : Nov 1, 2023, 12:42 PM IST
ಕೊಪ್ಪಳ : ರಾಜ್ಯಾದ್ಯಂತ 68ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ಇಂದು ಹಲವೆಡೆ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಗಿದೆ. ಜಿಲ್ಲೆಯ ಕುಕನೂರು ಪಟ್ಟಣದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಿಬ್ಬಂದಿ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿದ್ದಾರೆ. ರಾಜ್ಯೋತ್ಸವ ನಿಮಿತ್ತ ಕುಕನೂರು ಬಸ್ ನಿಲ್ದಾಣದಲ್ಲಿ ಮೊದಲು ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಬಸ್ ಕಂಡಕ್ಟರ್, ಚಾಲಕ ಮತ್ತು ಇತರ ಸಿಬ್ಬಂದಿ ಉಪಸ್ಥಿತರಿದ್ದರು.
ಬಳಿಕ ಕುಕನೂರಿನಿಂದ ಹುಬ್ಬಳ್ಳಿಗೆ ಹೊರಟ ಬಸ್ಗೆ ಆಗಮಿಸಿದ ಪ್ರಯಾಣಿಕರಿಗೆ ನಿರ್ವಾಹಕ ಅಶೋಕ್ ಭಂಗಿ ಅವರು ಎಲ್ಲರಿಗೂ ಕನ್ನಡದ ಶಾಲು ನೀಡಿ ಸ್ವಾಗತಿಸಿದರು. ಟಿಕೆಟ್ ವಿತರಿಸಿದ ಬಳಿಕ ನಿರ್ವಾಹಕರು ಕನ್ನಡ ಹಾಡು ಹೇಳಿ, ಜೊತೆಗೆ ಹಾಡಿಗೆ ತಕ್ಕಂತೆ ನೃತ್ಯ ಮಾಡಿ ಪ್ರಯಾಣಿಕರನ್ನು ರಂಜಿಸಿದರು. ನಂತರ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಿಹಿ ತಿಂಡಿ ವಿತರಿಸಿದರು.
ಪ್ರಯಾಣಿಕರಿಂದ ಮೆಚ್ಚುಗೆ :ಕನ್ನಡ ಧ್ವಜ ಹಾಗೂ ವಿವಿಧ ಹೂವುಗಳಿಂದ ಸಾರಿಗೆ ಬಸ್ಸನ್ನು ಅಲಂಕಾರ ಮಾಡಲಾಗಿತ್ತು. ಇದನ್ನು ಕಂಡು ಬಸ್ನಲ್ಲಿದ್ದ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ :ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಕರ್ನಾಟಕ ರಾಜ್ಯೋತ್ಸವ: ಕುಣಿದು ಕುಪ್ಪಳಿಸಿದ ಯುವಜನತೆ