ವಿಜಯೇಂದ್ರನಿಂದ ಚದುರಿಹೋದ ಲಿಂಗಾಯತ ಮತಗಳು ಕ್ರೋಢೀಕರಣ: ಸಂಸದ ಸಂಗಣ್ಣ ಕರಡಿ - ಸಂಸದ ಸಂಗಣ್ಣ ಕರಡಿ
Published : Nov 11, 2023, 4:52 PM IST
ಕೊಪ್ಪಳ: ಕಾಂಗ್ರೆಸ್ನಲ್ಲಿ ಲಿಂಗಾಯತರಿಗೆ ದೊಡ್ಡ ಮಟ್ಟದ ಗೌರವ ಸಿಗುತ್ತಿಲ್ಲ. ಚದುರಿಹೋದ ಲಿಂಗಾಯತ ಮತಗಳು ಮತ್ತೆ ಬಿ.ವೈ ವಿಜಯೇಂದ್ರ ಅವರಿಂದ ಕ್ರೋಢೀಕರಣವಾಗಲಿವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಶನಿವಾರ ಮಾತನಾಡಿದ ಅವರು, ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅವರಿಗೆ ಅಭಿನಂದನೆ, ಇದರಿಂದ ಬಿಜೆಪಿಗೆ ಬಹಳ ದೊಡ್ಡ ಶಕ್ತಿ ಬಂದಂತಾಗಿದೆ. ವಿಜಯೇಂದ್ರ ಯುವಕರಾಗಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟಿದ್ದಾರೆ. ನಮ್ಮ ಗವಿಸಿದ್ದಪ್ಪನ ಆಶೀರ್ವಾದ ಕೂಡ ಅವರ ಮೇಲೆ ಇದೆ. ವಿಜಯೇಂದ್ರ ಅವರ ರಾಜ್ಯಾಧ್ಯಕ್ಷತೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಶಕ್ತಿ ಬರಲಿದೆ. ಈ ಹಿಂದೆ ಬಿಜೆಪಿಗೆ ಬಂದ ಸ್ಥಾನಗಳು ಮತ್ತೆ ಬರುತ್ತವೆ ಎಂದ ಕರಡಿ ಸಂಗಣ್ಣ ಹೇಳಿದರು.
ಬೇರೆಯವರಿಗೆ ಅಸಮಾಧಾನ ಸಹಜವಾಗಿ ಇರುತ್ತದೆ. ವಿಜಯೇಂದ್ರ ಹಿರಿಯರಿಗೆ ಗೌರವ ಕೊಡುವ ಮೂಲಕ ಸರಿ ತೂಗಿಸಿಕೊಂಡು ಹೋಗುತ್ತಾರೆ. ಎಲ್ಲಾ ಪಕ್ಷದಲ್ಲಿ ಈ ರೀತಿ ಪೈಪೋಟಿ ಇದ್ದೇ ಇರುತ್ತದೆ. ಹೈಕಮಾಂಡ್ ಯಾರನ್ನಾದರೂ ಒಬ್ಬರನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾದವರಿಗೆ ಬೆಂಬಲ ನೀಡುವುದೊಂದೇ ನಮ್ಮ ಕೆಲಸ. ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪರ್ಫಾಮಿಂಗ್ ಸರಿಯಾಗಿ ಇರಲಿಲ್ಲ. ಲೋಕಾಸಭೆ ಚುನಾವಣೆಯಲ್ಲಿ ವಿಜಯೇಂದ್ರ ಆ ಶಕ್ತಿ ತುಂಬುತ್ತಾರೆ. ಎಲ್ಲ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅನುಕೂಲವಾಗಲಿದೆ ಎಂದರು.
ಕರ್ನಾಟಕಕ್ಕೆ ಹೊಸ ನಾಯಕತ್ವ ಬೇಕಾಗಿತ್ತು: ಯಡಿಯೂರಪ್ಪ ಅವರ ಮಗ ಎನ್ನುವ ಕಾರಣಕ್ಕೆ ಬಿ.ವೈ ವಿಜಯೇಂದ್ರನಿಗೆ ರಾಜ್ಯಾದ್ಯಕ್ಷ ಸ್ಥಾನ ಕೊಟ್ಟಿಲ್ಲ. ಪಕ್ಷಕ್ಕಾಗಿ ದುಡಿದ ಹಿನ್ನೆಲೆ ಕೊಡಲಾಗಿದೆ. ಇಡೀ ರಾಜ್ಯದಲ್ಲಿ ವಿಜಯೇಂದ್ರ ಓಡಾಡಿದ್ದಾರೆ. ಹಾಗಾಗಿ ಹೈಕಮಾಂಡ್ ವಿಜಯೇಂದ್ರ ಅವರಿಗೆ ನಾಯಕತ್ವ ಕೊಟ್ಟಿದೆ. ಅವರದ್ದೇ ಆದ ವರ್ಚಸ್ಸು ಹಾಗೂ ತಂಡವೂ ಇದೆ . ಒಟ್ಟಾರೆ ಕರ್ನಾಟಕಕ್ಕೆ ಒಂದು ಹೊಸ ನಾಯಕತ್ವ ಬೇಕಾಗಿತ್ತು ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.