ಮೊಬೈಲ್ ಟವರ್ ಏರಿ ಕುಳಿತ ಕಳ್ಳ: ಸ್ಥಳಕ್ಕೆ ನ್ಯಾಯಾಧೀಶರು ಬರುವಂತೆ ಪಟ್ಟು - ಮೊಬೈಲ್ ಟವರ್ ಹತ್ತಿ ಕುಳಿತ ವ್ಯಕ್ತಿ
ಧಾರವಾಡ: ನ್ಯಾಯಾಧೀಶರು ಸ್ಥಳಕ್ಕೆ ಬರುವಂತೆ ಆಗ್ರಹಿಸಿ ಮೊಬೈಲ್ ಟವರ್ ಏರಿ ಕುಳಿತಿದ್ದ ಕಳ್ಳನನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಟವರ್ ಏರಿ ಕುಳಿತವನನ್ನು ಜಾವೇದ್ ಎಂದು ಗುರುತಿಸಲಾಗಿದೆ. ಧಾರವಾಡದ ಜ್ಯುಬಿಲಿ ಸರ್ಕಲ್ ಬಳಿ ಇರುವ ಮೊಬೈಲ್ ಟವರ್ನ್ನು ಏರಿ ಕುಳಿತಿದ್ದ ಈತ ಪಿಕ್ ಪಾಕೆಟರ್ ಎನ್ನಲಾಗಿದೆ. ಈತನ ಮೇಲೆ ಅರೆಸ್ಟ್ ವಾರೆಂಟ್ ಸಹ ಇದೆ ಎನ್ನಲಾಗಿದೆ. ಹೀಗಾಗಿ ಜಿಲ್ಲಾ ನ್ಯಾಯಾಧೀಶರು ಸ್ಥಳಕ್ಕೆ ಬರುವವರೆಗೂ ತಾನು ಟವರ್ ಬಿಟ್ಟು ಇಳಿದು ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದ.
ಬಳಿಕ ರೆಸ್ಕ್ಯೂ ತಂಡದ ಇಬ್ಬರು ಸಿಬ್ಬಂದಿ ಟವರ್ ಏರಿ ಆತನಿಗೆ ನೀರು ಹಾಗೂ ಊಟವನ್ನೂ ಕೊಟ್ಟು ಕೆಳಗಿಳಿಯುವಂತೆ ಸೂಚನೆ ನೀಡಿದ್ದರು. ಆದರೆ, ಆ ವ್ಯಕ್ತಿ ಊಟವನ್ನು ಕೆಳಗೆ ಎಸೆದು ಕೇವಲ ನೀರು ಮಾತ್ರ ಕುಡಿದು ಕೆಳಗೆ ಇಳಿದು ಬರುವುದಿಲ್ಲ ಎಂದು ಹುಚ್ಚಾಟ ನಡೆಸಿದ್ದ. ಅಲ್ಲದೇ ತನಗೆ ಸಿಗರೇಟ್ ಕೊಡುವಂತೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದ್ದು, ಸತತ ಮೂರು ಗಂಟೆಗಳ ಬಳಿಕ ರೆಸ್ಕ್ಯೂ ತಂಡದ ಸಿಬ್ಬಂದಿ ಆತನ ಮನವೊಲಿಸಿ ಸುರಕ್ಷಿತವಾಗಿ ಕೆಳಗಿಳಿಸಿಕೊಂಡು ಬಂದಿದ್ದಾರೆ. ಉಪನಗರ ಠಾಣೆ ಪೊಲೀಸರು ಜಾವೇದ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಫೋಟೋ ತೆಗೆದುಕೊಳ್ಳಲು ವಂದೇ ಭಾರತ್ ರೈಲು ಹತ್ತಿ ಒಳಗೆ ಸಿಲುಕಿಕೊಂಡ ವ್ಯಕ್ತಿ.. ವಿಡಿಯೋ ವೈರಲ್