ಸಿಖ್ ಯುವಕ ಹತ್ಯೆ, ಗುರುದ್ವಾರ ಮೇಲೆ ದಾಳಿ ಪ್ರಕರಣ: ಸ್ಯಾಡ್ ನಿಯೋಗದಿಂದ ಜೈಶಂಕರ್ಗೆ ಮನವಿ - SAD delegation at MEA,
ನನಕಾನಾ ಸಾಹಿಬ್ ಗುರುದ್ವಾರದ ಮೇಲೆ ನಡೆದ ದಾಳಿಗೆ ತೀವ್ರ ವಿರೋಧ ವ್ಯಕ್ತವಾಗಿರುವ ಸಂದರ್ಭದಲ್ಲೇ ಪಾಕಿಸ್ತಾನದ ಪೇಶಾವರದಲ್ಲಿ ಸಿಖ್ ಯುವಕನನ್ನು ಹತ್ಯೆ ಮಾಡಲಾಗಿದೆ. ರವೀಂದರ್ ಸಿಂಗ್ ಎಂಬುವರನ್ನು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಚಮ್ಕನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮೃತದೇಹ ಪತ್ತೆಯಾಗಿದ್ದು, ಈ ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿಖ್ ಧರ್ಮ ಸ್ಥಾಪಕ ಗುರುನಾನಕ್ ದೇವ್ ಅವರ ಜನ್ಮಸ್ಥಳ ‘ನನಕಾನಾ ಸಾಹಿಬ್’ ಗುರುದ್ವಾರದ ಮೇಲೆ ಗುಂಪೊಂದು ಶುಕ್ರವಾರ ಕಲ್ಲು ತೂರಾಟ ನಡೆಸಿತ್ತು. ಬಳಿಕ ಆ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ದಾಳಿಯಿಂದ ಗುರುದ್ವಾರಕ್ಕೆ ಹಾನಿಯಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ದಾಳಿಯನ್ನು ಭಾರತದ ಹಲವು ರಾಜಕೀಯ ಪಕ್ಷಗಳು ಮತ್ತು ಸಿಖ್ ಸಂಘಟನೆಗಳು ಖಂಡಿಸಿದ್ದಾವೆ. ಈಗ ಶಿರೋಮಣಿ ಅಕಾಲಿ ದಳ (ಸ್ಯಾಡ್)ದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಜೊತೆ ಚರ್ಚೆ ನಡೆಸಿ ಪಾಕಿಸ್ತಾನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.