ಮಳೆಗಾಲದಲ್ಲಿ ಅನೇಕ ರೀತಿಯ ರೋಗಗಳು ಹರಡುವುದು ಕಾಮನ್. ವಿಶೇಷವಾಗಿ ಈ ಅವಧಿಯಲ್ಲಿ ಕೆಲವು ನಿರ್ದಿಷ್ಟ ಆಹಾರ ಸೇವನೆಯಿಂದ ಅನೇಕ ರೀತಿಯ ಸೋಂಕುಗಳು ಹರಡುತ್ತದೆ. ಈ ನಿಟ್ಟಿನಲ್ಲಿ ಕೆಲವು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ಕರಿದ ಆಹಾರ: ಕರಿದ ಆಹಾರಗಳನ್ನು ಇಷ್ಟಪಡದವರಿಲ್ಲ ಎನ್ನಬಹುದು. ಆದರೆ, ಕೆಲವು ತಜ್ಞರು ಹೇಳುವಂತೆ ಈ ಸಮಯದಲ್ಲಿ ಈ ಆಹಾರ ಸೇವನೆ ಉತ್ತಮವಲ್ಲ. ಕಾರಣ, ವಾತಾವರಣದಲ್ಲಿನ ಆರ್ದ್ರತೆ ಹೆಚ್ಚಿರುತ್ತದೆ. ಇದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆ ಕೂಡ ನಿಧಾನವಾಗುತ್ತದೆ. ಹೀಗಾಗಿ ಎಣ್ಣೆಯಲ್ಲಿ ಕರಿದ ಆಹಾರಗಳು ಸುಲಭವಾಗಿ ಜೀರ್ಣವಾಗುವುದಿಲ್ಲ. ಫಲಿತಾಂಶವಾಗಿ ಜೀರ್ಣ ಕ್ರಿಯೆ ಸಮಸ್ಯೆ ಹೆಚ್ಚುತ್ತದೆ. ಜೊತೆಗೆ ಕರಿದ ಆಹಾರಗಳಿಂದ ಅನಗತ್ಯ ಕೊಬ್ಬು ದೇಹದಲ್ಲಿ ಶೇಖರಣೆ ಆಗಿ, ಸ್ಥೂಲಕಾಯದಂತಹ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಇಂತಹ ಆಹಾರದಿಂದ ದೂರ ಇರುವುದು ಉತ್ತಮ.
ಇದಕ್ಕೆ ಹೇಳಿ ಬೈ ಬೈ: ಹೊರಗಿನ ಅದರಲ್ಲೂ ಬೀದಿ ಬದಿಯ ಆಹಾರಗಳು ಅತಿಸಾರ ಮತ್ತು ಜಾಂಡೀಸ್ನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇಂತಹ ಆಹಾರಗಳನ್ನು ಅವರು ಸುರಕ್ಷಿತ ನೀರಿನಿಂದ ತಯಾರಿಸಿರುವುದಿಲ್ಲ. ಈ ಹಿನ್ನಲೆ ಈ ರೀತಿಯ ಕೆಲವು ಆಹಾರಗಳನ್ನು ತಿನ್ನುವುದು ನಿಲ್ಲಿಸುವುದೇ ಉತ್ತಮ ಪರಿಹಾರ. ಇದರ ಜೊತೆಗೆ ಆದಷ್ಟು ಮಟ್ಟಿಗೆ ಹೊರಗಡೆ ಹಣ್ಣಿನ ಜ್ಯೂಸ್ ಕುಡಿಯುವುದನ್ನು ತಪ್ಪಿಸಿ. ಇದರ ಬದಲು ಮನೆಯಲ್ಲಿಯೇ ಜ್ಯೂಸ್ ತಯಾರಿಸಿ ಸೇವನೆ ಮಾಡುವುದು ಉತ್ತಮ.
ಹಸಿರು ಆಹಾರದ ಬಗ್ಗೆ ಎಚ್ಚರಿಕೆ: ಮಾನ್ಸೂನ್ ಸಮಯದಲ್ಲಿ ಹಸಿರು ಸೊಪ್ಪುಗಳ ಸೇವನೆ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾಗಿರುವುದು ತೀರಾ ಅಗತ್ಯವಾಗಿದೆ. ಯಾಕೆಂದರೆ ಯಾವುದೇ ಬೇರಿನಲ್ಲಿ ಯಥೇಚ್ಚ ಮಣ್ಣು ಇರುತ್ತದೆ. ಅದರಲ್ಲಿ ಸಾಕಷ್ಟು ಸೂಕ್ಷ್ಮಾಣುಗಳು ಕೂಡ ಸೇರುವ ಸಾಧ್ಯತೆ ಇದೆ. ಅನೇಕ ವೇಳೆ ಕೆಲವು ಕೀಟಾಣುಗಳು ಹಸಿರು ತರಕಾರಿಯಲ್ಲಿ ಬೆರೆತಿರುತ್ತದೆ. ಇವು ಕಣ್ಣಿಗೆ ಕಾಣದ್ದಾಗಿರುತ್ತದೆ. ಇಂತಹ ಆಹಾರಗಳನ್ನು ಸೇವಿಸಿದಾಗ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಾನ್ಸೂನ್ನಲ್ಲಿ ಹಸಿರು ಇರುವ ವಸ್ತುಗಳ ಬಗ್ಗೆ ಅವಶ್ಯವಾಗಿ ಜಾಗ್ರತೆ ವಹಿಸಬೇಕು. ಅಲ್ಲದೇ, ಇವುಗಳನ್ನು ಬಳಸುವಾಗ ಎರಡು ಸಲ ಚೆನ್ನಾಗಿ ತೊಳೆದು, ಗಮನಿಸಿ ಸೇವಿಸಿ. ಅದರಲ್ಲೂ ಮಶ್ರೂಮ್ಗಳಿಂದ ದೂರು ಇರುವುದು ಆರೋಗ್ಯಕ್ಕೆ ಉತ್ತಮ
ಮೊದಲೇ ತರಕಾರಿ ಕತ್ತರಿಸಬೇಡಿ: ಬೆಳಗಿನ ಹೊತ್ತು ಸಮಯ ಸಾಕಾಗುವುದಿಲ್ಲ ಎಂದು ಹಿಂದಿನ ರಾತ್ರಿಯೇ ಹಣ್ಣು ಮತ್ತು ತರಕಾರಿಗಳನ್ನು ಕತ್ತರಿಸಿ ಇಡಲಾಗುವುದು. ಆದರೆ, ಮಳೆಗಾಲದಲ್ಲಿ ಇದನ್ನು ಮಾಡುವುದು ಸೂಕ್ತವಲ್ಲ ಎನ್ನುತ್ತಾರೆ ತಜ್ಞರು. ಕಾರಣ ಮಳೆಗಾಲದ ಆರ್ದ್ರತೆಯಿಂದಾಗಿ ಎಷ್ಟೇ ಮುನ್ನೆಚ್ಚರಿಕೆವಹಿಸಿದರೂ ಬ್ಯಾಕ್ಟೀರಿಯಾಗಳು ಅದರಲ್ಲಿ ಸೇರುತ್ತವೆ. ಈ ಹಿನ್ನಲೆ ತಾಜಾವಾಗಿ ತರಕಾರಿ ಕತ್ತರಿಸಿ, ಬಳಕೆ ಮಾಡುವುದು ಸೂಕ್ತ ಎನ್ನುತ್ತಾರೆ.