ವಾತಾವರಣದಲ್ಲಾಗುವ ಬದಲಾವಣೆ ಚರ್ಮದ ಮೃದುತ್ವದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಚಳಿಗಾಲದ ಸಮಯದಲ್ಲಿ ಅನೇಕರಲ್ಲಿ ಕೈ ಮತ್ತು ಕಾಲು ಒಡೆಯುವುದು ಸಹಜ. ಚರ್ಮದ ಶುಷ್ಕತೆಯಿಂದ ಬಳಲುವುದು ಸಾಮಾನ್ಯ. ಈ ರೀತಿ ಯಾವುದೇ ಸಮಸ್ಯೆ ಕಾಡದಂತೆ ಕಾಪಾಡಲು ಕೆಲವು ಕ್ರಮವನ್ನು ವಹಿಸುವುದು ಅಗತ್ಯ. ಈ ಮೂಲಕ ಕೈ ಮತ್ತು ಪಾದದ ಮೃದುತ್ವವನ್ನು ಕಾಪಾಡಿಕೊಳ್ಳಬಹುದು.
ಚಳಿಗಾಲದಲ್ಲಿ ಅನೇಕರ ಪಾದಗಳಲ್ಲಿ ಡೆಡ್ಸೆಲ್ ಹೆಚ್ಚಿ ಮೃದುತ್ವ ಮರೆಯಾಗುತ್ತದೆ. ಇಂತಹ ಬಿರಿದ ಪಾದದ ಸಮಸ್ಯೆಯಿಂದ ನಿವಾರಣೆ ಪಡೆಯಬೇಕು ಎಂದರೆ, ಕೊಬ್ಬರಿ ಎಣ್ಣೆಯನ್ನು ರಾತ್ರಿ ಹೊತ್ತು ಪಾದಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ಬೆಳಗ್ಗೆ ಪಾದವನ್ನು ಸಕ್ಕರೆಯಿಂದ ಉಜ್ಜಿ, ಪುಮೈಸ್ ಕಲ್ಲಿನಿಂದ ಚೆನ್ನಾಗಿ ಸ್ಕ್ರಬ್ ಮಾಡಬೇಕು. ಪ್ರತಿ ಎರಡು ದಿನಗಳಿಗೊಮ್ಮೆ ಈ ರೀತಿ ಮಾಡುವುದರಿಂದ ಪಾದದ ಬಿರುಕಿನ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಇದರ ಜೊತೆಗೆ ಕೈ ಮತ್ತು ಕಾಲುಗಳಿಗೆ ಮಾಯಶ್ಚರೈಸರ್ ಹಚ್ಚುವುದನ್ನು ಮರೆಯಬಾರದು. ಈ ಋತುಮಾನದಲ್ಲಿ ವಾಕ್ಗೆ ಹೋಗುವಾಗ ತಪ್ಪದೇ, ಸಾಕ್ಸ್ ಧರಿಸಬೇಕು.
ಅತಿ ಸುಲಭವಾಗಿ ಈ ಸಮಸ್ಯೆಗೆ ಪರಿಹಾರ ಸಿಗಬೇಕು ಎಂದರೆ, ಕೈ ಮತ್ತು ಕಾಲುಗಳಿಗೆ ಪ್ರತಿನಿತ್ಯ ಶಿಯಾ ಬಟ್ಟರ್ (ಶಿಯಾ ಬೆಣ್ಣೆ)ಯನ್ನು ಹಚ್ಚಿ ಹತ್ತು ನಿಮಿಷ ಮಸಾಜ್ ಮಾಡುವುದರಿಂದ ಚರ್ಮ ಮೃದು ಆಗುತ್ತದೆ. ಎಪ್ಸಮ್ ಉಪ್ಪು ಕೂಡ ಒಣ ಚರ್ಮಗಳ ಸಮಸ್ಯೆಗೆ ಉತ್ತಮ ಪರಿಹಾರ ಆಗಿದೆ. ಬೆಚ್ಚಗಿನ ನೀರಿಗೆ ಈ ಎಪ್ಸಮ್ ಉಪ್ಪನ್ನು ಹಾಕಿ ಕಾಲು ಅಥವಾ ಕೈಯನ್ನು ಅದರಲ್ಲಿ 10 ನಿಮಿಷ ಇಡಬೇಕು. ವಾರದಲ್ಲಿ ಮೂರು ದಿನ ಈ ರೀತಿ ಮಾಡುವುದರಿಂದ ಉತ್ತಮ ರಕ್ತ ಸಂಚಾರ ಕೂಡ ಆಗಲಿದ್ದು, ಅದರ ಮಯಶ್ಚರೈಸರ್ ಕಾಪಾಡಲು ಸಹಕಾರಿ.