ಬೆಂಗಳೂರು: ಜಾಗತಿಕವಾಗಿ ಭಾರತ ಚೀನಾ ದೇಶದ ನಂತರ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ಎರಡನೇ ದೊಡ್ಡ ದೇಶವಾಗಿದೆ. ಭಾರತದಲ್ಲಿ ಕರ್ನಾಟಕ ಮಧುಮೇಹಿಗಳನ್ನು ಹೊಂದಿರುವ ಮೂರನೇ ಅತಿ ದೊಡ್ಡ ರಾಜ್ಯವಾಗಿದೆ.
ಗುಣಮಟ್ಟದ ಆಹಾರ ಸೇವಿಸಬೇಕು: ದಿನದಿಂದ ದಿನಕ್ಕೆ ಮಧುಮೇಹಿಗಳ ಸಂಖ್ಯೆ ದೇಶ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದ್ದರೆ, ಇದರ ನಿಯಂತ್ರಣಕ್ಕಾಗಿ ಸಾಕಷ್ಟು ಎಚ್ಚರಿಕೆ ಮೂಡುತ್ತಿದ್ದು ಜನ ಇದರ ಪಾಲನೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.
ಮೊದಲನೆಯದಾಗಿ ಮಧುಮೇಹ ಹೆಚ್ಚಾಗಲು ವಂಶ ಪಾರಂಪರ್ಯ ಕಾರಣವಾದರೆ, ಬದಲಾದ ಆಹಾರ ಪದ್ಧತಿ ಎರಡನೇಯದಾಗಿದೆ. ಜನ ಸೇವಿಸುವ ಆಹಾರ ಹಿಂದೆ ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಆದರೆ, ಇಂದು ಹೋಟೆಲ್ ಹಾಗೂ ಕುರುಕಲು ತಿಂಡಿಗೆ ಜನ ಹೆಚ್ಚಾಗಿ ಮರೆಹೋಗಿದ್ದು, ಗುಣಮಟ್ಟದ ಆಹಾರ ಸೇವಿಸದೇ ಮಧುಮೇಹದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
ವೈದ್ಯ ಲೋಕಕ್ಕೆ ದೊಡ್ಡ ಮಟ್ಟದ ಸವಾಲಾಗಿರುವ ಮಧುಮೇಹ ನಿಯಂತ್ರಣದ ವಿಚಾರವಾಗಿ ರಾಜ್ಯ ಸರ್ಕಾರ ಸಹ ಗಮನಹರಿಸಬೇಕು ಎಂದು ಕೆಲ ತಜ್ಞರು ಅಭಿಪ್ರಾಯಪಡುತ್ತಾರೆ. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಇರುವಂತೆಯೇ ದೇಶದ ವಿವಿಧ ರಾಜ್ಯಗಳಲ್ಲಿ ಬಡವರಿಗೆ ಸರ್ಕಾರದಿಂದಲೇ ಅಕ್ಕಿ ವಿತರಿಸುವ ಕಾರ್ಯ ಆಗುತ್ತಿದೆ. ಪಡಿತರ ರೂಪದಲ್ಲಿ ನೀಡುವ ಅಕ್ಕಿಯನ್ನು ಸರ್ಕಾರಗಳು ವಿಪರೀತ ಪಾಲೀಶ್ಗೆ ಒಳಪಡಿಸುತ್ತಿವೆ. ಇದರಿಂದಾಗಿ ಜನರಿಗೆ ಅಕ್ಕಿಯಲ್ಲಿ ಇರುವ ನಿಜವಾದ ಸತ್ವ ಸಿಗದೆ ಹೋಗುತ್ತಿದೆ.
ಪಾಲೀಶ್ ಮಾಡಿದ ಅಕ್ಕಿ ಒಳ್ಳೆಯದಲ್ಲ: ಜನರಿಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿರುವ ಸರ್ಕಾರ ಅದರ ಸರಿಯಾದ ಲಾಭ ಜನರಿಗೆ ಸಿಗದಂತೆ ಮಾಡಿದೆ. ಸರ್ಕಾರ ನೀಡುವ ಅಕ್ಕಿ ಅತಿಯಾದ ಪಾಲೀಶ್ಗೆ ಒಳಪಡುವುದರಿಂದ, ಜನ ಸತ್ವ ರಹಿತ ಅಕ್ಕಿ ಸೇವಿಸಿ ಮಧುಮೇಹ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಕ್ಕಿಯ ಬಳಕೆಯಿಂದ ಮಧುಮೇಹ ಹೆಚ್ಚುವ ಸಾಧ್ಯತೆ ಇರುತ್ತದೆ. ಆದರೆ, ಎಲ್ಲಾ ಅಕ್ಕಿಯ ಬಳಕೆ ಅಪಾಯಕಾರಿ ಅಲ್ಲ.
ಅತಿಯಾಗಿ ಪಾಲಿಶ್ ಮಾಡಿ ತೆಳುವಾಗಿಸಿದ ಬಿಳಿ ಅಕ್ಕಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮಧುಮೇಹ ಹೆಚ್ಚಳಕ್ಕೂ ಕಾರಣವಾಗಬಲ್ಲದು. ಜನ ಹುಟ್ಟಿನಿಂದಲೂ ಒಂದು ಆಹಾರ ಪದ್ಧತಿಗೆ ಹೊಂದಿಕೊಂಡಿರುತ್ತಾರೆ. ಅದನ್ನ ಬದಲಿಸುವ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ತಾವು ಸೇವಿಸುವ ಆಹಾರವನ್ನೇ ಸರಿಯಾದ ಹಾಗೂ ಗುಣಮಟ್ಟದ ರೀತಿಯಲ್ಲಿ ಸೇವಿಸುವಂತೆ ವೈದ್ಯರು ಈಚಿನ ದಿನಗಳಲ್ಲಿ ಜನರಿಗೆ ಸಲಹೆ ನೀಡುತ್ತಿದ್ದಾರೆ.
ಆರೋಗ್ಯ ಜಾಗೃತಿ:ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳಿಗೆ ಹಾಗೂ ರಾಗಿ ಸೇವನೆಗೆ ಸರ್ಕಾರ ನೀಡುತ್ತಿರುವ ಹೆಚ್ಚಿನ ಒತ್ತು ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಈ ಕಾರಣದಿಂದಲೂ ರಾಜ್ಯ ಮೂರನೇ ಸ್ಥಾನದಿಂದ ಇನ್ನೂ ಉತ್ತಮ ಗುಣಮಟ್ಟದತ್ತ ಸಾಗುವ ಅವಕಾಶ ಇದೆ. ಜನರಲ್ಲಿ ಮೂಡುತ್ತಿರುವ ಜಾಗೃತಿ ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿ ಲಭಿಸುತ್ತಿದ್ದು, ರಾಜ್ಯದಲ್ಲಿಯೂ ಮಧುಮೇಹಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಬಹುದು ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಮಧುಮೇಹಿಗಳ ಸಂಖ್ಯೆ:ಮಧುಮೇಹ ನಿಯಂತ್ರಣಕ್ಕೆ ಸೂಕ್ತ ಮಾರ್ಗದರ್ಶನ ದೊರೆಯುತ್ತಿದ್ದು, ಸರ್ಕಾರ ಸಹ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಮಧುಮೇಹದ ಜಾಗೃತಿ ಅಷ್ಟಾಗಿ ಆಗಿಲ್ಲ. ಈ ಭಾಗದತ್ತ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು ಗಮನ ಹರಿಸಿ ಜಾಗೃತಿ ಮೂಡಿಸುವತ್ತ ಒಲವು ತೋರಿಸಬೇಕು.
ಕೆಲ ವರ್ಷಗಳ ಹಿಂದೆ ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಕಡಿಮೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಈ ಪ್ರಮಾಣ ಕಡಿಮೆಯಾಗಿದ್ದು, ಆಧುನಿಕತೆಯ ಸ್ಪರ್ಶ ಗ್ರಾಮೀಣ ಭಾಗಕ್ಕೂ ತಟ್ಟಿದೆ. ನಗರಕ್ಕೆ ಹೋಲಿಸಿದರೆ ಶೇಕಡಾ ಹತ್ತರಷ್ಟು ಮಾತ್ರ ಮಧುಮೇಹಿಗಳ ಸಂಖ್ಯೆ ಗ್ರಾಮೀಣ ಭಾಗದಲ್ಲಿ ಕಡಿಮೆ ಇದೆ. ದಿನದಿಂದ ದಿನಕ್ಕೆ ಇವರ ಸಂಖ್ಯೆ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದ್ದು, ಮುಂದೊಂದು ದಿನ ನಗರ ಪ್ರದೇಶಕ್ಕೆ ಸರಿಸಮನಾಗಿ ಬೆಳೆದು ನಿಂತರು ಅಚ್ಚರಿ ಇಲ್ಲ.
ಕೋವಿಡ್ ನಂತರ ಸಮಸ್ಯೆ ಹೆಚ್ಚಳ: ಜಗತ್ತನ್ನ ದೊಡ್ಡಮಟ್ಟದಲ್ಲಿ ಕಾಡಿದ ಕೋವಿಡ್ ಮಧುಮೇಹಿಗಳನ್ನು ಹೆಚ್ಚಿಸಲು ಸಹ ತನ್ನದೇ ಆದ ಕೊಡುಗೆ ನೀಡಿದೆ. ಒಂದೆಡೆ ಕೋವಿಡ್ನ ಅಡ್ಡ ಪರಿಣಾಮ ಮಧುಮೇಹ ಹೆಚ್ಚಿಸಿದರೆ, ಇನ್ನೊಂದೆಡೆ ಕೋವಿಡ್ ಸಂದರ್ಭದಲ್ಲಿ ಜನ ಅನುಭವಿಸಿದ ನಿರಾಳತೆ ಹಾಗೂ ಅದನ್ನೇ ಈಗಲೂ ಮುಂದುವರಿಸಿಕೊಂಡು ಸಾಗಿರುವುದು ರೋಗಭಾದೆ ಹೆಚ್ಚಳವಾಗಲು ಕಾರಣವಾಗಿದೆ.