ಕರ್ನಾಟಕ

karnataka

ಇದ್ದ ಪುಡಿಗಾಸು ಪ್ರವಾಹದ ಪಾಲಾಯ್ತು, ಬದುಕು ಬೀದಿಗೆ ಬಂತು: ಗರ್ಭಿಣಿಯ ಕಣ್ಣೀರ ಕಥೆ..!

By

Published : Aug 16, 2019, 10:54 AM IST

ಮುದ್ದಾದ ಕಂದನ ನಿರೀಕ್ಷೆಯಲ್ಲಿರುವ ಗರ್ಭಿಣಿವೋರ್ವಳು ಪ್ರವಾಹದಿಂದ ತಮ್ಮ ಬದುಕಿನಲ್ಲಾದ ಕರಾಳತೆಯನ್ನು ಈಟಿವಿ ಭಾರತ ಎದುರು ಬಿಚ್ಚಿದ್ದಾಲೆ. ಹೆರಿಗೆ ಸಮಯಕ್ಕೆಂದು ಕೂಡಿಟ್ಟಿದ್ದ ಪುಡಿಗಾಸು ಮಳೆ ನೀರಲ್ಲಿ ಕೊಚ್ಚಿ ಹೋಗಿದೆ ಎನ್ನುತ್ತಲೇ ಮಹಿಳೆಯ ಕಣ್ಣಾಲೆಗಳು ತುಂಬಿಬಂದವು.

ತುಂಬು ಗರ್ಭಿಣಿಯ ಕಣ್ಣೀರು

ಯಾದಗಿರಿ: 'ನಾನು ತುಂಬು ಗರ್ಭಿಣಿ ಅದೇನ್ರಿ ಸರ್​, ಆಸ್ಪತ್ರೆಗೆ ಹೋಗಾಕ್​ ದುಡ್ಡಿಲ್ಲ. ಇದ್ದ ಹಣವೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗೈತಿ. ಈಗ ನಾನು ಏನ್​ ಮಾಡ್ಬೇಕು? ನನಗ್ಯಾರು ದಿಕ್ಕು?' ಹೀಗೆ ಪ್ರವಾಹದ ಭೀಕರತೆಯನ್ನು ತೆರೆದಿಟ್ಟ ತುಂಬು ಗರ್ಭಿಣಿ ಕವಿತಾರ ಕಣ್ಣೀರಿನ ಕಥೆ ಎಂತ ಕಲ್ಲು ಹೃದಯದವರನ್ನು ಕರಗಿಸುವಂತಿದೆ.

ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಿದ ಹಿನ್ನೆಲೆ ಗೆದ್ದಲಮರಿ ತಾಂಡ ಜಲದಿಗ್ಭಂಧನಕ್ಕೆ ಒಳಗಾಗಿತ್ತು. ತಾಂಡದ ಜನರನ್ನು ಸ್ಥಳಾಂತರಿಸಲಾಗಿತ್ತಾದರೂ, ಮನೆಗಳು-ಗುಡಿಸಲುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಇದರಲ್ಲಿ ಗರ್ಭಿಣಿ ಕವಿತಾ ಸಹ ಸೂರು ಕಳೆದುಕೊಂಡಿದ್ದಾರೆ.

ತುಂಬು ಗರ್ಭಿಣಿಯ ಕಣ್ಣೀರ ಕಥೆ

ನಿರಾಶ್ರಿತರ ಕೇಂದ್ರದಲ್ಲಿ ನಮಗೆ ಊಟ, ಬಟ್ಟೆ ಕೊಡ್ತೀರಿ. ಸ್ವಲ್ಪ ದಿನದ ನಂತರ ನಮ್ಮನ್ನು ಮನೆಗೆ ಕಳಿಸ್ತೀರಿ. ಆದ್ರೆ ನಮಗೆ ಮನೆಯಿಲ್ಲ, ಇದ್ದ ಗುಡಿಸಲು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಜಮೀನು ಸಹ ಪ್ರವಾಹಕ್ಕೆ ಸಿಲುಕಿದೆ. ತಂದೆ-ತಾಯಿ ಇಲ್ಲದ ನನಗೆ ಹೆರಿಗೆ ನೋವು ಕಾಣಿಸಿಕೊಂಡರೆ ಯಾರು ದಿಕ್ಕು ಎಂದು ಕವಿತಾ ಕಣ್ಣೀರಿಡುತ್ತಿದ್ದಾಳೆ.

ಇನ್ನು ಗ್ರಾಮ ಪಂಚಾಯತ್​ನವರು ಮನೆ ನೀಡಿಲ್ಲ. ಜಾಗ ಕೂಡ ಕೊಟ್ಟಿಲ್ಲ. ಅಧಿಕಾರಿಗಳು ಲಂಚಕ್ಕಾಗಿ ಸತಾಯಿಸುತ್ತಿದ್ದಾರೆ ಎಂದು ಸಂತ್ರಸ್ತೆ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details