ಸುರಪುರ : ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೆ ಮುಡುಪಾಗಿಟ್ಟು ತಮ್ಮ ಪ್ರಾಣವನ್ನೇ ಬಲಿದಾನ ನೀಡಿದ ಮಹಾತ್ಮ ಗಾಂಧಿಯವರ ಮೂರ್ತಿಯನ್ನು ಮೂರು ದಶಕದ ಹಿಂದೆ ಸುರಪುರ ನಗರದ ಹೃದಯ ಭಾಗದಲ್ಲಿ ಅನಾವರಣಗೊಳಿಸಲಾಗಿತ್ತು.
ರಾಜಾ ಮದನಗೋಪಾಲ ನಾಯಕ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಮೂರ್ತಿ ಅನಾವರಣಗೊಳಿಸಿಲಾಗಿದೆ. ಈ ಮೂರ್ತಿಯ ವೃತ್ತ ವ್ಯವಸ್ಥೆ ಗಮನಿಸಬೇಕಾದ ಪುರಸಭೆ, ದಶಕದ ಹಿಂದೆ ಮೂರ್ತಿಗೆ ಒಂದಿಷ್ಟು ಛಾವಣಿ ನಿರ್ಮಿಸಿದೆ. ನಾಲ್ಕಾರು ಕಬ್ಬಿಣದ ಪೈಪ್ ಮತ್ತು ಮೇಲೆ ಪ್ಲಾಸ್ಟಿಕ್ ಸೀಟುಗಳನ್ನು ಹಾಕಿ ಕೈತೊಳೆದುಕೊಂಡಿತು.
ಮಹಾತ್ಮ ಗಾಂಧಿ ವೃತ್ತ ನಿರ್ಲಕ್ಷ್ಯವಹಿಸಿದ ಸುರಪುರ ನಗರಸಭೆ: ಸಾರ್ವಜನಿಕರ ಅಸಮಾಧಾನ ಸದ್ಯ ಮಹಾತ್ಮಾ ಗಾಂಧಿ ಮೂರ್ತಿ ಸುತ್ತ ನಿರ್ಮಿಸಲಾದ ಬೇಲಿ ಮತ್ತು ಪ್ಲಾಸ್ಟಿಕ್ ಸೀಟುಗಳು ಮುರಿದು ಹೋಗಿದ್ದು, ಮಳೆ ಬಂದರೆ ಎಲ್ಲಾ ನೀರು ಒಳಗೆ ಬೀಳುತ್ತಿದೆ.
ಈ ಮೇಲ್ಛಾವಣಿ ನಿರ್ಮಿಸಲು ಬಳಸಿದ ಕಳಪೆ ಗುಣಮಟ್ಟದ ಕಬ್ಬಿಣದ ಪೈಪ್ಗಳು ಕೂಡ ಗಾಳಿಗೆ ಬಾಗಿದ್ದು, ಯಾವಾಗ ಬೇಕಾದರು ಛಾವಣಿ ಮಗುಚಿ ಬೀಳುವ ಹಂತದಲ್ಲಿದೆ. ಇದರ ಕುರಿತು ಅನೇಕ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ನಗರಸಭೆಯ ಗಮನಕ್ಕೆ ತಂದರೂ ಪ್ರಯೋಜನೆಯಾಗಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮಹಾತ್ಮ ಗಾಂಧಿ ವೃತ್ತ ಹೊಸದಾಗಿ ನಿರ್ಮಾಣ ಮಾಡುವ ಉದ್ದೇಶದಿಂದ 10 ಲಕ್ಷ ರೂಗೂ ಅಧಿಕ ಹಣವನ್ನು ಕಳೆದ 4 ವರ್ಷಗಳ ಹಿಂದೆಯೆ ನಗರಸಭೆ ತೆಗೆದಿರಿಸಿದೆ. ಆದರೆ ಈ ಹಣ ಏನಾಗಿದೆ ಎಂಬುದರ ಮಾಹಿತಿ ನೀಡುತ್ತಿಲ್ಲ. ಕೇವಲ ಸ್ವಾತಂತ್ರ್ಯ ದಿನಾಚರಣೆ ಮತ್ತು ಅಕ್ಟೋಬರ್ 2ರ ಗಾಂಧಿ ಜಯಂತಿ ಮತ್ತು ಜನವರಿ 26 ಗಣರಾಜ್ಯೋತ್ಸವ ದಿನದಂದು ಮಾತ್ರ ಮೂರ್ತಿ ಆವರಣಕ್ಕೆ ಸುಣ್ಣ ಬಳಿದು ಮುರಮ್ ಹಾಕಿಸುವುದು ಬಿಟ್ಟರೆ ಇನ್ನುಳಿದಂತೆ ಯಾವುದೇ ಕಾಳಜಿ ತೋರುತ್ತಿಲ್ಲ ಎಂದು ದಲಿತಪರ ಹೋರಾಟಗಾರ ಮಾಳಪ್ಪ ಕಿರದಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ.