ಕರ್ನಾಟಕ

karnataka

ಯಾದಗಿರಿ: ನಾಗರಪಂಚಮಿ ದಿನ ಚೇಳುಗಳನ್ನು ಮೈಮೇಲೆ ಬಿಟ್ಟುಕೊಳ್ಳುವ ವಿಶೇಷ ಪದ್ಧತಿ!

By

Published : Aug 2, 2022, 7:27 PM IST

ಕೊಂಡಮ್ಮ ದೇವಿ ಪಕ್ಕಕ್ಕಿರುವ ಚೇಳು ಮೂರ್ತಿಗೆ ಹಾಲೆರೆಯುವುದು ಇಲ್ಲಿನ ವಿಶೇಷ. ಹಬ್ಬದಂದು ಯಾವುದೇ ಕಲ್ಲುಗಳನ್ನು ತೆಗೆದು ನೋಡಿದರೂ ಅಲ್ಲಿ ಚೇಳುಗಳು ಕಾಣಿಸುತ್ತವೆ. ನಿರ್ಭಯವಾಗಿ ಅವುಗಳನ್ನು ಹಿಡಿದು ಅವುಗಳೊಂದಿಗೆ ಜನರು ಆಟವಾಡುತ್ತಾರೆ.

ಯಾದಗಿರಿಯಲ್ಲಿ ನಾಗರಪಂಚಮಿ ಹಬ್ಬ
ಯಾದಗಿರಿಯಲ್ಲಿ ನಾಗರಪಂಚಮಿ ಹಬ್ಬ

ಯಾದಗಿರಿ: ನಾಗರ ಪಂಚಮಿ ಹಬ್ಬವನ್ನು ನಾಗಪ್ಪನಿಗೆ ಹಾಲೆರೆಯುವುದರ ಮೂಲಕ ಆಚರಿಸುವುದು ಸಾಮಾನ್ಯ. ಆದರೆ, ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಜನರು ಚೇಳುಗಳನ್ನು ಹಿಡಿದು ಅವುಗಳೊಂದಿಗೆ ಆಟವಾಡುತ್ತಾ, ಮೈಮೇಲೆಲ್ಲ ಬಿಟ್ಟುಕೊಂಡು ಆಚರಿಸುತ್ತಾರೆ.

ಯಾದಗಿರಿಯಲ್ಲಿ ನಾಗರಪಂಚಮಿ ಹಬ್ಬದ ಸಂಭ್ರಮ

ಈ ವಿಶಿಷ್ಟ ಪದ್ಧತಿಗಾಗಿ ಕಂದುಕೂರ ಗ್ರಾಮದ ಕೊಂಡಮ್ಮ ಬೆಟ್ಟಕ್ಕೆ ಬೀದರ್​, ರಾಯಚೂರು, ಗುಲ್ಬರ್ಗಾ ಹಾಗು ಆಂಧ್ರಪ್ರದೇಶದ ಕೊಡಂಗಲ್, ತಾಂಡೂರ ಮುಂತಾದ ಕಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹೀಗೆ ಬಂದವರು ಚೇಳುಗಳನ್ನು ಹಿಡಿದು ಭಕ್ತಿ ಮೆರೆಯುತ್ತಾರೆ. ಸಾಯಂಕಾಲವಾಗುತ್ತಿದಂತೆ ಮಕ್ಕಳಿಂದ ಹಿಡಿದು ಹಿರಿಯರೆಲ್ಲರೂ ಬೆಟ್ಟ ಏರಿ ದೇವರ ದರ್ಶನ ಪಡೆದು ಚೇಳುಗಳು ಹಿಡಿಯುತ್ತಾರೆ. ಕೊಂಡಮ್ಮ ದೇವಿ ಪಕ್ಕಕ್ಕಿರುವ ಚೇಳು ಮೂರ್ತಿಗೆ ಹಾಲೆರೆಯುವುದೇ ಇಲ್ಲಿನ ವಿಶೇಷ. ಹಬ್ಬದಂದು ಯಾವುದೇ ಕಲ್ಲುಗಳನ್ನು ತೆಗೆದು ನೋಡಿದರೂ ಅಲ್ಲಿ ಚೇಳುಗಳು ಕಾಣಿಸುತ್ತವೆ. ನಿರ್ಭಯವಾಗಿ ಅವುಗಳನ್ನು ಹಿಡಿದು ಅವುಗಳೊಂದಿಗೆ ಜನರು ಆಟವಾಡುತ್ತಾರೆ. ಅಷ್ಟೇ ಏಕೆ, ಈ ಚೇಳುಗಳನ್ನು ಮುಖ, ಕೈ ಸೇರಿದಂತೆ ಮೈಮೇಲೆಲ್ಲ ಹರಿದಾಡಲು ಬಿಟ್ಟು ಆನಂದಿಸುತ್ತಾರೆ. ವಿಶೇಷ ಎಂದರೆ, ಇವುಗಳು ಯಾರಿಗೆ ಕಚ್ಚುವುದಿಲ್ಲ ಎನ್ನುತ್ತಾರೆ ಭಕ್ತರು.

ವೈಜ್ಞಾನಿಕ ಸತ್ಯ ಏನು?:ಕಂದಕೂರು ಗ್ರಾಮದ ಬೆಟ್ಟವು ಕೆಂಪು ಮತ್ತು ಮರಳುಮಿಶ್ರಿತ ಮಣ್ಣು ಹೊಂದಿದ್ದು ತೇವಾಂಶದಿಂದ ಕೂಡಿದೆ. ಇದು ಚೇಳುಗಳ ಸಂತಾನೋತ್ಪತ್ತಿಗೆ ಅನುಕೂಲಕರವಾದ ವಾತಾವಾರಣ ಹೊಂದಿದೆ. ನಾಗರ ಪಂಚಮಿ ಸಂದರ್ಭದಲ್ಲಿ ಮಳೆಯಿಂದ ಭೂಮಿ ತಂಪಾಗಿರುತ್ತದೆ. ಈ ಸಂದರ್ಭದಲ್ಲಿ ಚೇಳುಗಳು ಸಂತನೋತ್ಪತ್ತಿಯಲ್ಲಿ ತೊಡಗಿರುತ್ತವೆ. ಪಂಚಮಿ ಮುಗಿದ ಐದು ದಿನಗಳಲ್ಲಿ ಚೇಳುಗಳು ಬೆಟ್ಟದ ತುಂಬೆಲ್ಲ ಕಾಣಿಸುತ್ತವೆ. ಈ ಚೇಳುಗಳಲ್ಲಿ ಅನೇಕ ತರಹದ ಪ್ರಭೇದಗಳಿವೆ. ಇಲ್ಲಿರುವ ಚೇಳುಗಳು ಕಡಿಮೆ ಪ್ರಮಾಣದ ವಿಷ ಹೊಂದಿವೆ ಎಂಬುದು ಪ್ರಯೋಗದ ಮೂಲಕ ತಿಳಿದು ಬಂದಿದೆ.

ಇದನ್ನೂ ಓದಿ:ಹುತ್ತಕ್ಕೆ ಹಾಲೆರೆಯಬೇಡಿ, ಹಾವು ಸಾಯುತ್ತದೆ: ಸ್ನೇಕ್ ಶ್ಯಾಮ್ ಸಲಹೆ

ABOUT THE AUTHOR

...view details