ಸುರಪುರ:ಕಾಲು ಜಾರಿ ಬಿದ್ದು ಎಪಿಎಂಸಿ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಬಾದ್ಯಾಪುರ ಗ್ರಾಮದಲ್ಲಿನ ಹೊಲಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುರಪುರ: ಕಾಲು ಜಾರಿ ಬಿದ್ದು ತಾಪಂ ಮಾಜಿ ಅಧ್ಯಕ್ಷ ಸಾವು - ಕಾಲುಜಾರಿ ಬಿದ್ದು ಸುರಪುರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿಧನ
ಬಾದ್ಯಾಪುರ ಗ್ರಾಮದ ಹೊರವಲಯದಲ್ಲಿರುವ ತಮ್ಮ ಪಪ್ಪಾಯಿ ತೋಟಕ್ಕೆ ಹೋಗುವ ಸಂದರ್ಭ ರಸ್ತೆ ಪಕ್ಕದಲ್ಲಿದ್ದ ಕಿರು ಸೇತುವೆಯೊಂದನ್ನು ದಾಟುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟಾದ ಪರಿಣಾಮ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಗ್ರಾಮದ ಮುಖಂಡ ಕೃಷ್ಣ ಬಾದ್ಯಾಪುರ ತಿಳಿಸಿದ್ದಾರೆ.
ತಾಲೂಕಿನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ತಾಲೂಕಿನ ಕುರುಬ ಸಮುದಾಯದ ಹಿರಿಯ ಮುಖಂಡರಾಗಿದ್ದ ನಿಂಗಣ್ಣ, ಮೊದಲು ಶಾಸಕ ರಾಜುಗೌಡ ಅವರೊಂದಿಗೆ ರಾಜಕೀಯದಲ್ಲಿ ಏಳಿಗೆ ಕಂಡು ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದರು. ನಂತರದಲ್ಲಿ ಪಕ್ಷ ಬದಲಾವಣೆ ಮಾಡಿಕೊಂಡು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರೊಂದಿಗೆ ಗುರುತಿಸಿಕೊಂಡು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಸುರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿದ್ದರು ಹಾಗೂ ಹಾಲಿ ಎಪಿಎಂಸಿ ಸದಸ್ಯರಾಗಿದ್ದರು.
ನಿಂಗಣ್ಣ ಬಾದ್ಯಾಪುರ ಅವರ ಅಕಾಲಿಕ ನಿಧನಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.