ಯಾದಗಿರಿ: ಕಲ್ಯಾಣ ಕರ್ನಾಟಕದ ಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೆಸರಾಂತ ಹಿರಿಯ ಸಾಹಿತಿ ಚಂದ್ರಕಾಂತ ಕರದಳ್ಳಿ (67) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಇಂದು ನಿಧನರಾದ ಕರದಳ್ಳಿಯವರ ಪಾರ್ಥಿವ ಶರೀರವನ್ನು ನಾಳೆ ಜಿಲ್ಲೆಯ ಶಹಪುರ ನಗರಕ್ಕೆ ತರಲಾಗುತ್ತದೆ. ಶಹಪುರದ ಅವರ ಜಮೀನಿನಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕರದಳ್ಳಿಯಲ್ಲಿರುವ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಯಾದಗಿರಿಯ ಚಂದ್ರಯ್ಯಸ್ವಾಮಿ ಕರದಳ್ಳಿ ಹಾಗೂ ಮುರಿಯಮ್ಮ ಎಂಬುವವರ ಪುತ್ರ ಚಂದ್ರಕಾಂತ ಕರದಳ್ಳಿ, ಶಹಾಪುರ ನಗರಲ್ಲಿ 1952 ರ ಅಗಸ್ಟ್ 25 ರಂದು ಜನಿಸಿದ್ದರು. ಕರದಳ್ಳಿ ಅವರು ಸಾಹಿತ್ಯ ಲೋಕದಲ್ಲಿ ಅಪಾರ ಪ್ರಮಾಣದಲ್ಲಿ ಸಾಧನೆ ಮಾಡುವ ಮೂಲಕ ಯಾದಗಿರಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಹೆಸರಾಂತ ಹಿರಿಯ ಸಾಹಿತಿ ಚಂದ್ರಕಾಂತ ಕರದಳ್ಳಿ ನಿಧನ ಬಯಲು ಸೀಮೆಯಿಂದ ಕರಾವಳಿ, ಮಾಯದ ಗಂಟೆ, ಸೋಲೆ ಇಲ್ಲ ಗೆಲುವೇ ಎಲ್ಲಾ, ಗಿರಿ ಸಿರಿ, ಮನದ ಮಾತು ಹೀಗೆ ನಲವತ್ತು ಕೃತಿಗಳನ್ನು ಪ್ರಕಟಿಸಿದ ಚಂದ್ರಕಾಂತ ಕರದಳ್ಳಿ ಅವರ ಕಾಡ ಕನಸಿನ ಬೀಡಿಗೆ ಎಂಬ ಕಾದಂಬರಿಗೆ 2019 ರ ಸಾಲಿನ ಬಾಲ ಸಾಹಿತ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದುಕೊಂಡ ಕರದಳ್ಳಿ ಅವರು ಈ ಹಿಂದೆ ಶಹಪುರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು ಮತ್ತು ಯಾದಗಿರಿಯಲ್ಲಿ ನಡೆದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯಕ್ರಮಕ್ಕೆ ಮೆರಗು ತಂದಿದ್ದರು.
ಪತ್ನಿ, ಇಬ್ಬರು ಮಕ್ಕಳು, ಅಪಾರ ಶಿಷ್ಯ ವರ್ಗ, ಬಂಧು ಬಳಗವನ್ನ ಅಗಲಿರುವ ಸಹಿತಿ ಕರದಳ್ಳಿ ನಿಧನದಿಂದ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ.