ಯಾದಗಿರಿ:ಸಂಕಷ್ಟದಿಂದ ಪಾರು ಮಾಡಿದ ಗಡೇ ದುರ್ಗಾದೇವಿ ದರ್ಶನ ಪಡೆಯಲು ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಳ ಗ್ರಾಮಕ್ಕೆ ಇಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಗಮಿಸಿದ್ದರು. ದೇವಿಗೆ ಪತ್ರ ಬರೆದು ವಿಶೇಷ ಪೂಜೆ ಸಲ್ಲಿಸಿದರು. ದೇವಿಯ ಜಾತ್ರೆ ಅಂಗವಾಗಿ ನಡೆದ ರಥೋತ್ಸವದಲ್ಲಿ ಅವರು ಪಾಲ್ಗೊಂಡಿದ್ದರು.
ಕಲಬುರಗಿ ಜಿಲ್ಲೆಯಿಂದ ರಸ್ತೆ ಮಾರ್ಗದ ಮೂಲಕ ಗೋನಾಳ ಗ್ರಾಮಕ್ಕೆ ಆಗಮಿಸಿದ್ದ ಡಿಕೆಶಿ ಅವರನ್ನು ಮೆರವಣಿಗೆ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ಗಡೇ ದುರ್ಗಾ ದೇವಿ ಮಂದಿರದ ಗರ್ಭಗುಡಿಯೊಳಗೆ ತೆರಳಿ, ದೇವಿಯ ಅರ್ಚಕ ಮಹಾದೇವಪ್ಪ ಪೂಜಾರಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವಿಯ ಸನ್ನಿಧಿಯಲ್ಲಿ ಬರೆದಿಟ್ಟ ಪತ್ರವನ್ನು ಡಿಕೆಶಿ ಇಟ್ಟು ಸಂಕಷ್ಟದಿಂದ ಪಾರು ಮಾಡಬೇಕೆಂದು ಪೂಜೆ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ರಾಜಕೀಯದಲ್ಲಿ ಒಳ್ಳೆಯದಾಗಬೇಕೆಂದು ಅರ್ಧ ಗಂಟೆ ವಿಶೇಷ ಪೂಜೆ ನೆರವೇರಿಸಿದರು.